ಕೋಲಾರ: ತಮ್ಮ ಬೆಂಬಲಿತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೆಳಗಿಳಿಸಿದ ಬೆನ್ನಲೇ ಜಿಲ್ಲೆಯ ಒಂದು ಬಣದ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಶನಿವಾರ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.
ಮುಖಂಡ ಹಾಗೂ ಗುತ್ತಿಗೆದಾರ ಮಾರ್ಜೇನಹಳ್ಳಿ ಬಾಬು ಅವರನ್ನು ಜಿಲ್ಲಾ ಕಾಂಗ್ರೆಶ್ ನೀತಿ ಸಂಶೋಧನೆ ಅಧ್ಯಕ್ಷರಾಗಿ ನೇಮಿಸಿರುವ ಹಿನ್ನೆಲೆಯಲ್ಲಿ ಮುನಿಯಪ್ಪ ಅವರನ್ನು ಭೇಟಿ ಮಾಡಿ ಧನ್ಯವಾದ ಅರ್ಪಿಸಲಾಯಿತು ಎಂಬುದಾಗಿ ಈ ಬಣದ ಮುಖಂಡರು ಹೇಳಿಕೊಂಡಿದ್ದಾರೆ.
ಆದರೆ, ಆ ನೆಪದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ನಲ್ಲಿ ನಡೆದಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಈಚೆಗೆ ಮುನಿಯಪ್ಪ ಬೆಂಬಲಿಗರೂ ಆಗಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪ್ರಸಾದ್ ಬಾಬು ಹಾಗೂ ಉದಯ್ ಶಂಕರ್ ಅವರನ್ನು ಕೆಳಗಿಳಿಸಲಾಗಿತ್ತು. ಬದಲಾಗಿ ಘಟಬಂಧನ್ ಬೆಂಬಲಿತ ಮೈಲಾಂಡಹಳ್ಳಿ ಮುರಳಿ ಹಾಗೂ ಸೈಯದ್ ಅಪ್ಸರ್ ಅವರನ್ನು ಆ ಸ್ಥಾನಗಳಿಗೆ ನೇಮಿಸಲಾಗಿತ್ತು. ಈ ಸಂಬಂಧ ಮುನಿಯಪ್ಪ ಅವರಿಗೆ ಮುಖಂಡರು ದೂರು ಹೇಳಿದ್ದಾರೆ ಎಂಬುದು ಗೊತ್ತಾಗಿದೆ.
ಭೇಟಿ ವೇಳೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಮುದ್ದು ಗಂಗಾಧರ್, ಮುಖಂಡರಾದ ಸೋಮಶೇಖರ್, ಕೆ.ಜಯದೇವ್, ನವೀನ್, ಸುಧೀರ್, ಪ್ರಸಾದ್ಬಾಬು, ಉದಯ್ ಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.