
ಕೋಲಾರ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗುತ್ತಿದ್ದರೂ ಕೈಗಾರಿಕೆಗಳು ಅಂತರ್ಜಲದ ಮೇಲೆ ಅವಲಂಬಿತವಾಗಿರುವುದನ್ನು ಕಡಿಮೆ ಮಾಡಬೇಕು. ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ವಿಫಲವಾದ ಕೊಳವೆ ಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕೇಸ್ವಾನ್ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಜಿಲ್ಲಾ ಅಂತರ್ಜಲ ಪ್ರಾಧಿಕಾರ’ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಾರಿಕೆಗಳು ಸ್ವಂತ ಮರುಪೂರಣ ಘಟಕಗಳನ್ನು ಹೊಂದಿದ್ದರೂ ಅಂತರ್ಜಲದ ಮೇಲಿನ ಅವಲಂಬನೆ ತಗ್ಗಿಸಿಲ್ಲ. ಉತ್ಪಾದನೆ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚಳದ ನೆಪವೊಡ್ಡಿ ಹೆಚ್ಚಿನ ನೀರು ಬಳಸುತ್ತಿದ್ದು, ಅದನ್ನು ನಿಯಂತ್ರಿಸಬೇಕು ಎಂದು ನಿರ್ದೇಶನ ನೀಡಿದರು.
ಕೈಗಾರಿಕಾ ಘಟಕಗಳಲ್ಲಿ ‘ಫ್ಲೋ ಮೀಟರ್’ ರೀಡಿಂಗ್ ಮತ್ತು ‘ಟೆಲಿಮೆಟ್ರಿ’ ದತ್ತಾಂಶವನ್ನು ಪ್ರತಿ ತಿಂಗಳು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಅಂತರ್ಜಲ ಲಭ್ಯತೆಯನ್ನು ಆಧರಿಸಿ ಇಂಡೋ ನಿಪ್ಪಾನ್ ಮತ್ತು ಎಎಸ್ಕೆ ಆಟೋಮೋಟಿವ್ ಅಂತಹ ಸಂಸ್ಥೆಗಳ ಪ್ರಸ್ತಾವನೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಬೇಕೆಂದು ಹೇಳಿದರು.
ಪಾಪರಾಜನಹಳ್ಳಿಯ ಅಂತರಗಂಗೆ ಬೆಟ್ಟದಲ್ಲಿ ವರ್ಷವಿಡೀ ಹರಿಯುವ ನೈಸರ್ಗಿಕ ಬುಗ್ಗೆಯ ಮೂಲವನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಲು ಸೂಚಿಸಿದರು.
ಸಾರ್ವಜನಿಕರು ಈ ಬುಗ್ಗೆಯ ನೀರನ್ನು ಕಲುಷಿತಗೊಳಿಸದಂತೆ ತಡೆಯಲು ಕೂಡಲೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಶ್ರೀನಿವಾಸಪುರ ತಾಲ್ಲೂಕು ಅಂತರ್ಜಲ ಅತಿಯಾದ ಬಳಕೆಯ ಪಟ್ಟಿಯಲ್ಲಿರುವುದರಿಂದ ಅಲ್ಲಿ ಹೊಸ ಕೊಳವೆ ಬಾವಿಗಳಿಗೆ ಅನುಮತಿ ನೀಡುತ್ತಿಲ್ಲ. ಆದರೆ, ಸರ್ಕಾರದ ‘ಗಂಗಾ ಕಲ್ಯಾಣ’ ಯೋಜನೆಗೆ ಮಾತ್ರ ವಿನಾಯಿತಿ ನೀಡಲಾಗಿದೆ. ರೀ-ಡ್ರಿಲ್ಲಿಂಗ್ ಕಾಮಗಾರಿಗಳಲ್ಲಿ ಕಂಡುಬಂದಿರುವ ತಾಂತ್ರಿಕ ಲೋಪಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ. ಬಾಗೇವಾಡಿ, ಹಿರಿಯ ಭೂವಿಜ್ಞಾನಿ ತಿಪ್ಪೇಸ್ವಾಮಿ, ಯೋಜನಾ ನಿರ್ದೇಶಕಿ ಅಂಬಿಕಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಬಳಕೆಯಾಗದ ವಿಫಲವಾದ ಕೊಳವೆ ಬಾವಿಯನ್ನು ಕಡ್ಡಾಯವಾಗಿ ಮುಚ್ಚಬೇಕು. ತೆರೆದ ಬಾವಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು. ಅಧಿಕಾರಿಗಳು ನಿಗಾ ವಹಿಸಬೇಕು.– ಎಂ.ಆರ್.ರವಿ, ಜಿಲ್ಲಾಧಿಕಾರಿ
171 ಕೊಳವೆಬಾವಿ ನೀರು
ಪರೀಕ್ಷೆ ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿರುವ ಕೆ.ಸಿ.ವ್ಯಾಲಿ ನೀರಿನಿಂದ ಅಂತರ್ಜಲ ಮರುಪೂರಣ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ. ಈ ಭಾಗದ ಸುಮಾರು 171 ಕೊಳವೆ ಬಾವಿಗಳ ನೀರಿನ ಮಾದರಿಯನ್ನು ಪರೀಕ್ಷಿಸಲಾಗಿದ್ದು 15 ಕೊಳವೆ ಬಾವಿಗಳಲ್ಲಿ ನೈಟ್ರೇಟ್ ಮತ್ತು ನೀರಿನ ಗಡಸುತನದ (ಹಾರ್ಡ್ನೆಸ್) ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ ಎಂದು ಎಂ.ಆರ್.ರವಿ ಹೇಳಿದರು.
ಭೂವಿಜ್ಞಾನಿಗಳು ಮಾತನಾಡಿ ‘ಶುದ್ಧೀಕರಿಸಿದ ನೀರು ಭೂಮಿಯ ವಿವಿಧ ಪದರಗಳ ಮೂಲಕ ಹಾದುಹೋಗುವಾಗ ನೈಸರ್ಗಿಕವಾಗಿ ಸೋಸಲ್ಪಡುತ್ತದೆ. ಹೀಗಾಗಿ ಆಳವಾದ ಕೊಳವೆ ಬಾವಿಗಳಲ್ಲಿ ಕಲ್ಮಶಗಳಿಲ್ಲದ ನೀರು ಲಭ್ಯವಾಗುತ್ತಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.
ಕೊಳವೆಬಾವಿ ಯೋಜನೆಗೆ ಅನುಮೋದನೆ
ಜಿಲ್ಲಾಧಿಕಾರಿ ಅಧ್ಯಕ್ಷತೆ ‘ಜಿಲ್ಲಾ ಅಂತರ್ಜಲ ಪ್ರಾಧಿಕಾರ’ದ ಸಭೆಯಲ್ಲಿ ವಿವಿಧ ಅಭಿವೃದ್ಧಿ ನಿಗಮಗಳ ಕೊಳವೆ ಬಾವಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಅಂಬೇಡ್ಕರ್ ಅಭಿವೃದ್ಧಿ ನಿಗಮದ 380 ಕೊಳವೆಬಾವಿ ದೇವರಾಜ ಅರಸು ಅಭಿವೃದ್ಧಿ ನಿಗಮದ 268 ಕೊಳವೆಬಾವಿ ಹಾಗೂ ಭೋವಿ ಅಭಿವೃದ್ಧಿ ನಿಗಮದ 46 ಕೊಳವೆಬಾವಿ ಯೋಜನೆಗೆ ಒಪ್ಪಿಗೆ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.