
ಕೋಲಾರ: ವಿವಿಧೆಡೆ ದಾಳಿ ಮಾಡಿ ವಶಕ್ಕೆ ಪಡೆದಿದ್ದ ಸುಮಾರು ₹ 3 ಕೋಟಿ ಮೌಲ್ಯದ 480 ಕೆ.ಜಿ ಗಾಂಜಾವನ್ನು ಅಬಕಾರಿ ಇಲಾಖೆಯು ನಾಶ ಮಾಡಿದೆ.
ರಾಜ್ಯದ ಐದು ಅಬಕಾರಿ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಡಿ ವಶಕ್ಕೆ ಪಡೆದಿದ್ದ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ತಾಲ್ಲೂಕು ಆಲೇರಿ ಗ್ರಾಮದ ಬಳಿಯ ಮೀರಾ ಎನ್ವಿರೋಟಿಕ್ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸೋಮವಾರ ಸುಟ್ಟು ಹಾಕಲಾಯಿತು.
ಕಳೆದ ಮೂರು ವರ್ಷಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಹಲವು ಪ್ರಕರಣ ದಾಖಲಿಸಿ ವಶಪಡಿಸಿಕೊಂಡಿದ್ದ ಗಾಂಜಾವನ್ನು ಅಬಕಾರಿ ಸಿಬ್ಬಂದಿ ಘಟಕಕ್ಕೆ ತಂದಿಳಿಸಿದರು. ಅಧಿಕಾರಿಗಳು ಗಾಂಜಾಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಗಾಂಜಾ ಹಾಗೂ ಮಾದಕ ವಸ್ತುಗಳಿಗೆ ಸಿಬ್ಬಂದಿ ಬೆಂಕಿ ಇಟ್ಟು ಸುಟ್ಟು ಹಾಕಿದರು.
ಅಬಕಾರಿ ಜಂಟಿ ಆಯುಕ್ತ ಗಿರೀಶ್ ಸಮ್ಮುಖದಲ್ಲಿ ನಾಶ ಮಾಡಲಾಯಿತು. ಕೋಲಾರ, ರಾಮನಗರ ಸೇರಿದಂತೆ ಬೆಂಗಳೂರಿನ 5 ಅಬಕಾರಿ ಉಪ ಆಯುಕ್ತರ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡಿದ್ದ ಗಾಂಜಾ, ಮತ್ತಿತರರ ಮಾದಕ ವಸ್ತುಗಳು ಬೆಂಕಿಗಾಹುತಿಯಾದವು.
ಪೊಲೀಸ್ ಇಲಾಖೆ ಮಾದರಿಯಲ್ಲೆ ಅಬಕಾರಿ ಇಲಾಖೆಯೂ ಕಳೆದ 3 ವರ್ಷಗಳಿಂದ ವಿವಿಧೆಡೆಯಲ್ಲಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿತ್ತು.
ಕಾನೂನಿನ ಕಣ್ಣುತಪ್ಪಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಜೈಲಿಗಟ್ಟಿ ಪ್ರಕರಣ ಇತ್ಯರ್ಥವಾದ ನಂತರ ನ್ಯಾಯಾಲಯದ ಅನುಮತಿ ಈ ಕ್ರಮ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.