ADVERTISEMENT

ಕೋಲಾರ | ಸುಲಿಗೆ ಆರೋಪ: ಮಕ್ಕಳ ಸಹಾಯವಾಣಿ ಅಧಿಕಾರಿ ವಜಾ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:15 IST
Last Updated 15 ಅಕ್ಟೋಬರ್ 2025, 7:15 IST
ಕಲ್ಯಾಣ್‌ಕುಮಾರ್‌
ಕಲ್ಯಾಣ್‌ಕುಮಾರ್‌   

ಕೋಲಾರ: ಕೆಜಿಎಫ್‌ ತಾಲ್ಲೂಕಿನ 17 ವರ್ಷದ ಬಾಲಕಿಯನ್ನು ಮದುವೆಯಾದ ವ್ಯಕ್ತಿಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಸುಲಿಗೆ ಮಾಡಿದ್ದ ಆರೋಪದಲ್ಲಿ ಬಂಧಿತರಾಗಿರುವ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ಕಲ್ಯಾಣ್‌ ಕುಮಾರ್‌ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ.

‘ಮಕ್ಕಳ ಸಹಾಯವಾಣಿ ಸಂಯೋಜಕ ಕಲ್ಯಾಣ್ ಕುಮಾರ್ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಲ್ಲಿ ಒಬ್ಬರಾಗಿದ್ದು, ಬಾಲ್ಯವಿವಾಹ ತಡೆಯುವುದು ಅವರ ಆದ್ಯ ಕರ್ತವ್ಯವಾಗಿದೆ. ಇಂಥ ಒಂದು ಪ್ರಕರಣದಲ್ಲಿ ಸಾರ್ವಜನಿಕರು ದೂರು ನೀಡಿದ್ದು, ಗಮನಕ್ಕೆ ಬಂದ ಕೂಡಲೇ ಪರಿಶೀಲಿಸಬೇಕಿತ್ತು, ಶಿಸ್ತು ಕ್ರಮ ಕೈಗೊಳ್ಳಬೇಕಿತ್ತು,‌ ಮೇಲಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬೇಕಿತ್ತು. ಇದಾವುದನ್ನು ಮಾಡದೆ ಕಾನೂನು ಬಾಹಿರವಾಗಿ ನಡೆದುಕೊಂಡು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿರುತ್ತಾರೆ’ ಎಂದು ವಜಾ ಆದೇಶದಲ್ಲಿ ತಿಳಿಸಲಾಗಿದೆ.

ಕರ್ತವ್ಯಲೋಪ ಎಸಗಿ, ಬಾಲ್ಯವಿವಾಹ ಪ್ರಕರಣದಲ್ಲಿ ದೂರು ದಾಖಲಿಸದೆ ನಿರ್ಲಕ್ಷ್ಯ ತೋರಿ, ಕಾನೂನು ಬಾಹಿರವಾಗಿ ನಡೆದುಕೊಂಡ ವಿಚಾರವಾಗಿ ಕೆಜಿಎಫ್ ತಾಲ್ಲೂಕು ಕ್ಯಾಸಂಬಳ್ಳಿ ಪೊಲೀಸ್ ಠಾಣೆಯಲ್ಲಿ ಅ.11ರಂದು ಎಫ್‌ಐಆರ್‌ ದಾಖಲಾಗಿರುತ್ತದೆ. ಪೊಲೀಸರು ಕಲ್ಯಾಣ್‌ಕುಮಾರ್ ಅವರನ್ನು ಬಂಧಿಸಿರುತ್ತಾರೆ. ಆದ್ದರಿಂದ ಜಿಲ್ಲೆಯ ಮಕ್ಕಳ ಸಹಾಯವಾಣಿ ಕೇಂದ್ರದಲ್ಲಿನ ಸಂಯೋಜಕರ ಹುದ್ದೆಯಿಂದ ಈ ಕೂಡಲೇ ವಜಾಗೊಳಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಮತ್ತು ಪೋಕ್ಸೊ ಕಾಯ್ದೆ-2012 ಬಲಿಷ್ಠ ಕಾಯ್ದೆಗಳಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿ ಕೇಂದ್ರ ಈ ಕಾಯ್ದೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಎರಡೂ ಕಾಯ್ದೆಗಳನ್ನು ಯಾರಾದರೂ ದುರಪಯೋಗಪಡಿಸಿಕೊಂಡರೆ ಅದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ರೀತಿ ಪ್ರಕರಣಗಳಲ್ಲಿ ನೊಂದ/ಬಾಧಿತರ ಬಳಿ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕ ಕರ ವಸೂಲಿಗಾರರೂ ಯಾರಾದರೂ ಸುಲಿಗೆ ಅಥವಾ ಲಂಚಕ್ಕೆ ಬೇಡಿಕೆ ಇಟ್ಟರೆ ಹೆದರಿಕೊಳ್ಳದೆ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಬೇಕೆಂದು ಕೋರಲಾಗಿದೆ.

ಜಿಲ್ಲೆಯಲ್ಲಿ ಸುಮಾರು 200 ಮಂದಿ ಬಾಲ್ಯವಿವಾಹ ನಿಷೇಧ ಅಧಿಕಾರಿ ಇದ್ದಾರೆ. ಯಾರೇ ತಪ್ಪು ಎಸಗಿದರೂ ಈ ರೀತಿಯ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ
ನಾರಾಯಣಸ್ವಾಮಿ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವ್ಯಕ್ತಿಯಿಂದ ಸುಲಿಗೆ– ಏನಿದು ಪ್ರಕರಣ?

ಕೆಜಿಎಫ್‌ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿಯೊಬ್ಬಳು ಗರ್ಭಿಣಿ ಆಗಿರುವ ವಿಷಯ ಮಕ್ಕಳ ಸಹಾಯವಾಣಿಗೆ ಬಂದಿತ್ತು. ತನಿಖೆ ನಡೆಸಲು ಅವರ ಮನೆಗೆ ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ಕಲ್ಯಾಣ್‌ ಕುಮಾರ್‌ ಹೋಗಿದ್ದಾರೆ. ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿ ಬಾಲಕಿಯನ್ನು ಮದುವೆಯಾದ 30 ವರ್ಷದ ವ್ಯಕ್ತಿ ಬಳಿ ₹ 50 ಸಾವಿರ ಬೇಡಿಕೆ ಇಟ್ಟಿದ್ದಾರೆ ಎಂಬುದು ಗೊತ್ತಾಗಿದೆ.

ಆ ವ್ಯಕ್ತಿಯು ಸಾಲ ಮಾಡಿ ₹ 30 ಸಾವಿರವನ್ನು ಮೂರು ಕಂತುಗಳಲ್ಲಿ ನೀಡಿದ್ದಾರೆ. ಆರೋಪಿಯು ಉಳಿದ ₹20 ಸಾವಿರ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಹಣ ಹೊಂದಿಸಲು ಸಾಧ್ಯವಾಗಿಲ್ಲ. ಪೋಕ್ಸೊ ಕಾಯ್ದೆಯಡಿ ದೂರು ದಾಖಲು ಮಾಡಿಕೊಳ್ಳಬೇಕು ಎಂದು ಕಲ್ಯಾಣ್‌ಕುಮಾರ್‌ ಕ್ಯಾಸಂಬಳ್ಳಿ ಪೊಲೀಸರಿಗೆ ದೂರು ನೀಡಲು ಪತ್ರ ಸಿದ್ಧ ಮಾಡಿ ಅದನ್ನು ಸಹಿ ಮಾಡಿಸಿಕೊಂಡಿದ್ದರು. ಅದನ್ನು ಕಳುಹಿಸಿ ಕೂಡಲೇ ಹಣ ಕೊಡದಿದ್ದರೆ ಪತ್ರವನ್ನು ಪೊಲೀಸರಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಯ ಕಾಟ ತಾಳಲಾರದೆ ಬಾಲಕಿ ಕುಟುಂಬಸ್ಥರು ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ವಾಸ್ತವ ಪರಿಸ್ಥಿತಿ ವಿವರಿಸಿದ್ದಾರೆ. ಕ್ಯಾಸಂಬಳ್ಳಿ ಪೊಲೀಸರು ಕಲ್ಯಾಣ್‌ಕುಮಾರ್‌ ಮತ್ತು ಬಾಲಕಿಯನ್ನು ಮದುವೆಯಾದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಕಲ್ಯಾಣ್‌ ಕುಮಾರ್‌ ಗುತ್ತಿಗೆ ನೌಕರರಾಗಿದ್ದರು ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.