ADVERTISEMENT

ಕೆಜಿಎಫ್‌: ಜೆಸಿಬಿಯಿಂದ ರೈತನ ತಳ್ಳಿದರು!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 6:27 IST
Last Updated 23 ಫೆಬ್ರುವರಿ 2025, 6:27 IST
ಕೆಜಿಎಫ್‌ ತಾಲ್ಲೂಕಿನ ರಾಮಸಾಗರದಲ್ಲಿ ಶುಕ್ರವಾರ ನೆಲ ಅಗೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ರೈತ ಮಹೇಶ್‌ನ್ನು ಎತ್ತಿ ಹಾಕಿದ ಸ್ಥಳೀಯ ಮುಖಂಡ
ಕೆಜಿಎಫ್‌ ತಾಲ್ಲೂಕಿನ ರಾಮಸಾಗರದಲ್ಲಿ ಶುಕ್ರವಾರ ನೆಲ ಅಗೆಯುತ್ತಿದ್ದ ವೇಳೆ ಜೆಸಿಬಿ ಮೂಲಕ ರೈತ ಮಹೇಶ್‌ನ್ನು ಎತ್ತಿ ಹಾಕಿದ ಸ್ಥಳೀಯ ಮುಖಂಡ   

ಕೆಜಿಎಫ್‌: ನೀರಿನ ಕೊಳವೆ ಅಳವಡಿಸಲು ಜೆಸಿಬಿ ಮೂಲಕ ನೆಲ ಅಗೆಯುತ್ತಿದ್ದಾಗ, ಅಡ್ಡಿಪಡಿಸಿದ ಪಕ್ಕದ ಜಮೀನಿನ ರೈತನನ್ನು ಜೆಸಿಬಿ ಹರಿಸಿ ಪಕ್ಕಕ್ಕೆ ತಳ್ಳಿದ ಘಟನೆ ರಾಮಸಾಗರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ರಾಮಸಾಗರದಲ್ಲಿ ನಾಗರಾಜ್‌ ಅವರು ತಮ್ಮ ಜಮೀನಿಗೆ ಪೈಪ್‌ ಹಾಕಲು ಶುಕ್ರವಾರ ಸಂಜೆ ಜೆಸಿಬಿ ಮೂಲಕ ನೆಲ ಅಗೆಸುತ್ತಿದ್ದರು. ಪಕ್ಕದ ಜಮೀನಿನ ಮಾಲೀಕ ಮಹೇಶ್‌ ಸ್ಥಳಕ್ಕೆ ಆಗಮಿಸಿ, ನೆಲ ಅಗೆಯುವುದರಿಂದ ತಮ್ಮ ಜಮೀನಿನ ಪೈಪ್‌ಗೆ ಹಾನಿಯಾಗುತ್ತದೆ. ಬೇರೆ ದಾರಿ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಈ ನಡುವೆ ಮಧ್ಯಪ್ರವೇಶಿಸಿದ ಸ್ಥಳೀಯ ಮುಖಂಡ ಪ್ರಸಾದ್‌ ರೆಡ್ಡಿ ಜೆಸಿಬಿ ಚಾಲಕನನ್ನು ಇಳಿಸಿ, ತಾವೇ ಜೆಸಿಬಿ ಚಲಾಯಿಸಿ ನೆಲ ಅಗೆಯಲು ಮುಂದಾಗಿದ್ದಾರೆ. ಈ ಹಂತದಲ್ಲಿ ಪ್ರತಿಭಟನೆಗೆ ಮುಂದಾದ ಮಹೇಶ್‌, ನೆಲ ಅಗೆಯಲು ಬಿಡುವುದಿಲ್ಲ ಎಂದು ನೆಲದಲ್ಲಿಯೇ ಕುಳಿತಿದ್ದಾರೆ. ಆಗ ಜೆಸಿಬಿ ಮೂಲಕ ಮಣ್ಣಿನ ಸಮೇತ ಮಹೇಶ್‌ ಅವರನ್ನು ಪ್ರಸಾದ್‌ ರೆಡ್ಡಿ ಪಕ್ಕಕ್ಕೆ ಎತ್ತಿ ಹಾಕಿದ್ದಾರೆ. ಘಟನೆಯಿಂದಾಗಿ ರೈತ ಮಹೇಶ್‌ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ವಲ್ಪ ಸಮಯದ ನಂತರ ಬೇತಮಂಗಲ ಸಬ್‌ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಮಹೇಶ್‌ ಅವರನ್ನು ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಇದು ಕೊಲೆ ಪ್ರಯತ್ನವಾಗಿದ್ದು, ಮುಖಂಡ ಪ್ರಸಾದ್‌ ರೆಡ್ಡಿ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಜೆಸಿಬಿ ಹರಿಸಿದ್ದಾರೆ. ಅದೇ ದಿನ ದೂರು ನೀಡಿದ್ದರೂ, ಇದುವರೆಗೂ ಪೊಲೀಸರು ವಿಚಾರಣೆಯನ್ನೂ ನಡೆಸಿಲ್ಲ. ಹೆಸರಿಗೆ ಮಾತ್ರ ಜೆಸಿಬಿಯನ್ನು ವಶಕ್ಕೆ ಪಡೆದಂತೆ ಮಾಡಿ ಮತ್ತೆ ಬಿಡುಗಡೆ ಮಾಡಿದ್ದಾರೆ ಎಂದು ಗಾಯಾಳು ಮಹೇಶ್‌ ದೂರಿದ್ದಾರೆ. ಘಟನೆ ಬಗ್ಗೆ ವಿಚಾರಣೆ ನಡೆಸಲಾಗಿದೆ. ಅಕ್ಕಪಕ್ಕದ ಜಮೀನಿನವರು ಗಲಾಟೆ ಮಾಡಿಕೊಂಡಿದ್ದಾರೆ. ಗಾಯಾಳು ದೂರು ನೀಡಿದರೆ, ಎಫ್‌ಐಆರ್‌ ದಾಖಲು ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಗಾಯಾಳು ಮಹೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.