ADVERTISEMENT

ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಪಿತೂರಿ: ಕಾಂಗ್ರೆಸ್ ನಾಯಕರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:47 IST
Last Updated 20 ಡಿಸೆಂಬರ್ 2025, 7:47 IST
ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಬೈರೇಗೌಡ ಅಭಿಮಾನಿ ಬಳಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ವಿಭಾಗದ ಮುಖಂಡರು ಮಾತನಾಡಿದರು
ಕೋಲಾರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣಬೈರೇಗೌಡ ಅಭಿಮಾನಿ ಬಳಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ವಿಭಾಗದ ಮುಖಂಡರು ಮಾತನಾಡಿದರು   

ಕೋಲಾರ: ಕಂದಾಯ ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತೇಜೋವಧೆಗೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಬೈರೇಗೌಡ ಅಭಿಮಾನಿ ಬಳಗ ಹಾಗೂ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ವಿಭಾಗದ ಪ್ರಧಾನ ಕಾರ್ಯದರ್ಶಿ ಸುಗಟೂರು ವಿಶ್ವನಾಥ್, ‘ಭೂ ಕಬಳಿಕೆ ಆರೋಪ ಸತ್ಯಕ್ಕೆ ದೂರ ಮತ್ತು ಆಧಾರರಹಿತವಾಗಿದೆ. ವಿಪಕ್ಷಗಳು ತಾಕತ್ತಿದ್ದರೆ ಸಾಕ್ಷಿ ಸಮೇತ ಸಾಬೀತು‌ಪಡಿಸಲಿ’ ಎಂದು ಸವಾಲು ಹಾಕಿದರು.

ಪ್ರತಿಪಕ್ಷದ ನಾಯಕರಾದ ಆರ್.ಆಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕ ಎನ್.ರವಿಕುಮಾರ್‌ ಹಾಗೂ ಮುಖಂಡ ತಮ್ಮೇಶ್ ಗೌಡ ಸತ್ಯಾಂಶ ತಿಳಿಯದೆ ಕೃಷ್ಣಬೈರೇಗೌಡರ ವಿರುದ್ಧ ಸುಳ್ಳು ಆರೋಪ ಮಾಡಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಕೋಲಾರ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾಹಿತಿ ಇಲ್ಲದೆ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಸರ್ಕಾರಿ ಜಮೀನು ಒತ್ತುವರಿ ಮಾಡುವಂತಹ ದಾರಿದ್ರ್ಯ ಸಚಿವರಿಗೆ ಬಂದಿಲ್ಲ. ತಾತನ ಕಾಲದಿಂದಲೂ ಸಾಕಷ್ಟು ಜಮೀನು ಇದೆ. ಕೃಷ್ಣ ಬೈರೇಗೌಡರಾಗಲಿ ಅವರ ತಂದೆ ಸಿ.ಬೈರೇಗೌಡರಾಗಲಿ ಯಾರೂ ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ವಿದೇಶದಲ್ಲಿದ್ದ ಕೃಷ್ಣಬೈರೇಗೌಡರು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ ಎಂದರು.

ವಿರೋಧ ಪಕ್ಷದವರು ಕೋಲಾರ ತಾಲ್ಲೂಕಿನ ನರಸಾಪುರ ಹೋಬಳಿ ಗರುಡನಪಾಳ್ಯ ಗ್ರಾಮದ ಕೆರೆಯಾಂಗಳದ ಸರ್ವೆ ನಂ. 46ರಲ್ಲಿ 20 ಎಕರೆ 16 ಗುಂಟೆ ಹಾಗೂ ಸರ್ವೆ ನಂಬರ್ 47ರಲ್ಲಿ 1 ಎಕರೆ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ಸಂದರ್ಭದಲ್ಲಿ ಕೃಷ್ಣಬೈರೇಗೌಡರು ನೇರವಾಗಿ ಈ ಜಾಗವು ತಮ್ಮ ತಾತನ ಮುಖೇನ ನಮ್ಮ ತಂದೆ ಸೇರಿದಂತೆ ನಮ್ಮ ಚಿಕ್ಕಪ್ಪಂದಿರಿಗೆ ಬಂದಿರುವ ಆಸ್ತಿಯಾಗಿದೆ. ಇದರಲ್ಲಿ ನಮ್ಮ ತಂದೆಗೆ ಬಂದ ಭಾಗವನ್ನು ನಮ್ಮ ಕುಟುಂಬದವರು ವಿಭಾಗ ಮಾಡಿ ಕೊಂಡಿರುವಂತಹ ಪಿತ್ರಾರ್ಜಿತ ಆಸ್ತಿ ಆಗಿದೆ ಎಂದು ವಿವರಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಸಂಸ್ಥೆ ಅಥವಾ ಲೋಕಾಯುಕ್ತಕ್ಕೆ ಒಪ್ಪಿಸಿ ತನಿಖೆ ಮಾಡಿಸಲು ಅಭ್ಯಂತರ ಇಲ್ಲ ಎಂದು ಕೂಡ ಸ್ಪಷ್ಟಡಿಸಿದ್ದಾರೆ ಎಂದರು.

ಸಚಿವರು ತನಿಖೆಗೆ ಅಡ್ಡಿಪಡಿಸಿದರೆ ಬೇಕಾದರೆ ಬಿಜೆಪಿಯವರು ಹೋರಾಟ ಮಾಡಲಿ. ಅನ್ಯಾಯ ಆಗಿದ್ದರೆ ‌ಕ್ರಮ ಆಗಲಿ ಎಂದು ಹೇಳಿದರು.

ನಾಗನಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ‘ಕೃಷ್ಣ ಬೈರೇಗೌಡರು ಕಂದಾಯ ಸಚಿವರಾದ ನಂತರ ಇಡೀ ರಾಜ್ಯದ ತಹಶೀಲ್ದಾರ್ ಕಚೇರಿಗಳಲ್ಲಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಿಸಿದ್ದಾರೆ. ದಾಖಲೆಗಳನ್ನು ಡಿಜಿಟಲ್ ಮಾಡಿಸಿದ್ದಾರೆ. ‌ಅಧಿಕಾರಿಗಳಿಗೆ ಚಳಿ ಬಿಡಿಸಿ ರೈತರನ್ನು ಕಚೇರಿಗಳಿಗೆ ಆಲೆದಾಡಿಸದಂತೆ ಎಚ್ಚರಿಸುವ ಕೆಲಸ ಮಾಡಿದ್ದಾರೆ’ ಎಂದು ವಿವರಿಸಿದರು.

ಇದನ್ನೇ ಮುಂದೆ ಮಾಡಿ ಪ್ರತಿಭಟಿಸುವ ಮೂಲಕ ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುವುದು, ಸಚಿವರ ವಿರುದ್ಧ ಕೇವಲವಾಗಿ ಮಾತನಾಡುವುದು, ಸುಳ್ಳು ಆರೋಪ ಮಾಡಿ ಅಪಪ್ರಚಾರ ಮುಂದುವರಿಸಿದರೆ ಮಾನನಷ್ಟ ಮೊಕದ್ದಮೆ ದಾಖಲಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುಗಟೂರು ಮಾಜಿ ಅಧ್ಯಕ್ಷ ಎಂ.ಕೆ.ಮಂಜುನಾಥ್, ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರೇ? ಜವಾಬ್ದಾರಿಯುತ ಸಚಿವರ ಮೇಲೆ ಸುಖಾಸುಮ್ಮನೇ ಆರೋಪ ಮಾಡುವುದು ಎಷ್ಟು ಸರಿ’ ಎಂದು ‍ಪ್ರಶ್ನಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜಣ್ಣ, ತೊಟ್ಲಿ ರಾಜಣ್ಣ, ಎಂ.‌ವೆಂಕಟೇಗೌಡ, ವಿ.ವೆಂಕಟಸ್ವಾಮಿ, ಪೆಟ್ರೋಲ್ ಬಂಕ್ ಬೀರಪ್ಪ, ಕೆ.ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.