ADVERTISEMENT

ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:57 IST
Last Updated 11 ಫೆಬ್ರುವರಿ 2026, 7:57 IST
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಬೆಂಗಳೂರು-ಕೋಲಾರ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಬೆಂಗಳೂರು-ಕೋಲಾರ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು   

ಕೋಲಾರ: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಬೆಂಗಳೂರು-ಕೋಲಾರ ಮುಖ್ಯ ರಸ್ತೆಯ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಮುಗಿಸಿಲ್ಲ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಕಾಮಗಾರಿ ಪ್ರಾರಂಭಿಸಿ 8 ತಿಂಗಳಾಗಿದ್ದರೂ ಈವರೆಗೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಹಲವಾರು ಬಾರಿ ಒತ್ತಾಯ ಮಾಡಿದರೂ ಕಾಲಹರಣ ಮಾಡುತ್ತಾ ಜನರಿಗೆ ದೂಳಿನ ಭಾಗ್ಯ ನೀಡಿದ್ದಾರೆ ಎಂದು ಆರೋಪಿಸಿದರು.

ನರಸಾಪುರ ಕೈಗಾರಿಕಾ ಪ್ರದೇಶ ಪಕ್ಕದಲ್ಲೇ ಇದ್ದು, ಜನಸಂಖ್ಯೆ ಹೆಚ್ಚಾಗಿದೆ. ಕೈಗಾರಿಕಾ ಪ್ರದೇಶಕ್ಕೆ ಓಡಾಡುವ ಭಾರಿ ವಾಹನಗಳು ಹಾಗೂ ಇತರೆ ಎಲ್ಲಾ ರೀತಿಯ ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ನಿತ್ಯ ಸಂಚರಿಸುತ್ತವೆ. ರಸ್ತೆಯ ಮೇಲಿರುವ ದೂಳು ಚಿಮಣಿಯಿಂದ ಬರುವ ಹೊಗೆಯ ರೀತಿಯಲ್ಲಿ ಬರುತ್ತದೆ. ಇದರಿಂದ ರಸ್ತೆಯ ಪಕ್ಕದಲ್ಲಿನ ಅಂಗಡಿಗಳ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಗುತ್ತಿಗೆದಾರನು ಅನೇಕ ಕಾರಣ ನೀಡಿ ವಿಳಂಬ ಮಾಡುತ್ತಿದ್ದಾರೆ. ದೂಳು ಮೇಲೇಳದಂತೆ ರಸ್ತೆಗೆ ಸರಿಯಾಗಿ ನೀರು ಹಾಕುತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದೂಳು ಮುಕ್ತ ನರಸಾಪುರ ಗ್ರಾಮ ಮಾಡಲು ರಸ್ತೆಗೆ ಕೂಡಲೇ ಡಾಂಬರ್‌ ಹಾಕಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಳಿ ಹೋಗಿ ಮನವಿ ಮಾಡಿದ್ದು, ಏನೂ ಪ್ರಯೋಜನವಾಗಿಲ್ಲ. ಇದೇ ರಸ್ತೆಯಲ್ಲಿ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಹೋಗಬೇಕಾಗಿದ್ದು, ದೂಳಿನಿಂದ ಆರೋಗ್ಯ ಹದಗೆಡುತ್ತಿದೆ. ತಮ್ಮ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗನೇ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.

ಗುತ್ತಿಗೆದಾರ ಚಂಬೆ ನಾರಾಯಣಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬಂದು ಮಾತನಾಡಿ, ‘ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ಮಂಗಳವಾರ ಅಥವಾ ಬುಧವಾರದೊಳಗೆ ರಸ್ತೆಗೆ ಡಾಂಬರು ಹಾಕಿ ಕಾಮಗಾರಿ ಮುಕ್ತಾಯಗೊಳಿಸಲಾಗುವುದು. ಎಂಜಿನಿಯರ್ ಯಾವ ರೀತಿ ಪ್ಲಾನ್ ಹಾಕಿದ್ದಾರೆಯೋ ಅದರಂತೆ ಕೆಲಸ ಮಾಡಲಾಗುತ್ತದೆ’ ಎಂದರು.

ನರಸಾಪುರ ಗ್ರಾಮದ ಎಲ್ಲಾ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಸಹಕಾರ ನೀಡಿದರು. ಸ್ಥಳದಲ್ಲಿ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಇದ್ದರು.

ಪ್ರತಿಭಟನೆಯಲ್ಲಿ ನರಸಾಪುರ ಗ್ರಾಮದ ಕೆಇಬಿ ಚಂದ್ರು, ಎನ್.ಕೆ.ನಾಗರಾಜ್, ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ದಲಿತ ಸಂಘಟನೆ ಮುಖಂಡ ಪುರಹಳ್ಳಿ ಯಲ್ಲಪ್ಪ, ನರಸಾಪುರ ಗ್ರಾಮದ ಮುಖಂಡರಾದ ಕುಮಾರ್, ಬಿ.ಶ್ರೀನಿವಾಸ್, ಎನ್.ಪಿ.ಶ್ರೀನಿವಾಸ್, ಭಾನುಪ್ರಕಾಶ್, ಓಂ ಪ್ರಕಾಶ್, ಗೋಪಿ, ಸುಮನ್, ಮುನಿರಾಜು ಸತೀಶ್, ಶೇಖರ್, ರಾಜೇಂದ್ರ, ಎಲ್.ನಾಗರಾಜ್, ಪಾನಿಪುರಿ ವೆಂಕಟೇಶ್, ಟಿ ಬಾಬು, ಕೃಷ್ಣಪ್ಪ, ಟಿಪ್ಪು, ಉಮೇಶ್, ವರ್ತಕರ ಸಂಘದ ಪದಾಧಿಕಾರಿಗಳು, ಅಂಗಡಿಗಳ ಮಾಲೀಕರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.