ADVERTISEMENT

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಗೆ ಶಾಸಕ ಮನವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 14:56 IST
Last Updated 5 ಜುಲೈ 2022, 14:56 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಕೋಲಾರ: 'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ವರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡಿದ್ದೇನೆ' ಎಂದು ಕ್ಷೇತ್ರದ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೋಲಾರ ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿಯನ್ನು ರಾಜ್ಯಕ್ಕೆ ನೀಡಿದ ಹೆಗ್ಗಳಿಕೆ ನಮ್ಮದಾಗಬೇಕು. ಸಿದ್ದರಾಮಯ್ಯ ಅವರನ್ನು ಈಚೆಗೆ ಭೇಟಿ ಮಾಡಿದ ಸಂದರ್ಭದಲ್ಲಿ ಕೋಲಾರ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಕಳುಹಿಸಿದಲ್ಲಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆ ಆಗುವುದು ಬಹುತೇಕ ಖಚಿತ' ಎಂದರು.

'ಕೋಲಾರ ಕ್ಷೇತ್ರ ಮಾತ್ರವಲ್ಲ; ಇಡೀ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಬಹಳಷ್ಟು ಅಭಿವೃದ್ಧಿಯಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಕೆ.ಎಚ್.ಮುನಿಯಪ್ಪ ಅವರು ಕೆ.ಆರ್.ರಮೇಶ್ ಕುಮಾರ್ ಅವರನ್ನು ಶನಿ ಎಂದೂ, ಮಾಟ ಮಂತ್ರ ಮಾಡಿ ಕರೆದುಕೊಂಡು ಹೋಗಿರುವ ಬಗ್ಗೆಯೂ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, 'ಮಾಟ ಮಂತ್ರದ ಬಗ್ಗೆ ಅವರಿಗೆ ಹೆಚ್ಚಿನ ಅನುಭವ ಇದೆ. 7 ಬಾರಿ‌ ಸಂಸದರಾಗಿ ಆಯ್ಕೆ‌ ಆಗಿದ್ದ‌ ಸಂದರ್ಭದಲ್ಲಿ ಅವರಿಗೆ ತಲೆ ನಿಲ್ಲುತ್ತಿರಲಿಲ್ಲ. ಸೋತ ಮೇಲೆ ಅದರ ರುಚಿ ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಅವರು ಸರಿ ಹೋಗುತ್ತಾರೆಂದು ತಿಳಿದಿದ್ದೇನೆ. ನನ್ನನ್ನು ಎರಡು ಬಾರಿ ಸೋಲಿಸಿದಾಗ ನನಗೆ ಎಷ್ಟು ನೋವಾಗಿತ್ತು ಎಂಬುದು ಈಗ ಮುನಿಯಪ್ಪ ಅವರಿಗೆ ಗೊತ್ತಾಗುತ್ತಿರಬಹುದು' ಎಂದರು.

ಶ್ರೀನಿವಾಸಗೌಡ ಅವರು 2018ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಗೆದ್ದಿದ್ದರು. ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವುದಾಗಿ ಹೇಳಿಕೊಂಡಿದ್ದರು. ಈಚೆಗೆ ಅವರನ್ನು ಜೆಡಿಎಸ್ ನಿಂದ‌ ಉಚ್ಚಾಟನೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.