
ವೇಮಗಲ್: ಹೋಬಳಿ ಕೇಂದ್ರದಿಂದ ನರಸಾಪುರ, ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ನೇರವಾದ ಬಸ್ ಸೌಲಭ್ಯಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಈ ವೇಳೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ವೇಮಗಲ್-ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳಿದ್ದು, ಸಾರ್ವಜನಿಕರ ಬೇಡಿಕೆ ಅನುಗುಣವಾಗಿ ಹೊಸ ಬಸ್ ಮಾರ್ಗವನ್ನು ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಮಾರ್ಚ್ ನಂತರ ಅವಶ್ಯಕತೆ ಇರುವ ಕಡೆ ಆದ್ಯತೆ ಮೇರೆಗೆ ಬಸ್ಗಳನ್ನು ಸಂಚರಿಸಿ. ಗುರುವಾರದಿಂದ ವೇಮಗಲ್, ನರಸಾಪುರ, ಹೊಸಕೋಟೆ ಮಾರ್ಗವಾಗಿ ಬೆಂಗಳೂರಿಗೆ ಬಸ್ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ವೇಮಗಲ್, ವಿಜಯಪುರ, ಯಲಹಂಕ, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ವಿಧಾನಸೌಧ ಮಾರ್ಗವಾಗಿ ಬೆಂಗಳೂರಿಗೆ ಮತ್ತೊಂದು ಹೊಸ ಮಾರ್ಗ ಮಾಡಿಕೊಡಬೇಕೆಂದು ತಿಳಿಸಿದರು.
ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಂ.ಮುನಿಯಪ್ಪ ಮಾತನಾಡಿ, ಈ ಭಾಗದ ಬಹುದಿನಗಳ ಬೇಡಿಕೆಯನ್ನು ಬೆಂಗಳೂರಿಗೆ ನೇರ ಬಸ್ ಸಂಚರಿಸುವ ಮೂಲಕ ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಮಚಾರ ಪ್ರಾರಂಭಿಸಬೇಕು. ಜೊತೆಗೆ ಬೆಂಗಳೂರಿನಿಂದ ವೇಮಗಲ್ಗೆ ಬರುವ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ವೇಮಗಲ್ – ನರಸಾಪುರ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸುಮಾರು 45 ಬಸ್ ಮಾರ್ಗ ಮತ್ತು ತಾಲ್ಲೂಕಿನಲ್ಲಿ 10 ಮಾರ್ಗವನ್ನು ಮುಚ್ಚಲಾಗಿತ್ತು. ಮಾರ್ಚ್ ನಂತರ ಆ ಮಾರ್ಗಗಳನ್ನು ಪ್ರಾರಂಭಿಸಲು ಶಾಸಕರು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರ ಅಗತ್ಯಕ್ಕೆ ತಕ್ಕತೆ ಸೇವೆ ಒದಗಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಡಿಪೊ ಮ್ಯಾನೇಜರ್ ಶ್ರೀನಿವಾಸ್, ಪಯಾಜ್ ಅಹಮದ್, ದೀಪಾ ವೆಂಕಟೇಶ್, ಶಶಿಕಲಾ ನಾಗೇಶ್, ಮಂಜುಳಾ ಮುನಿರಾಜ್, ನಟರಾಜ್, ತಾಸುಪ್ ಖಾನ್, ಬಿ.ನಾಗರಾಜ್, ಚೌಡಪ್ಪ, ನಾಗೇಶ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.