ಕೋಲಾರ: ಯಾವುದೇ ಗೊಂದಲ ಇಲ್ಲದ ಜಾತಿ ಕುರುಬ ಸಮುದಾಯ. ಹಿಂದೂ ಸಮಾಜ ಕಟ್ಟಿ ಬೆಳೆಸಿದವರು ಹಾಲು ಮತಸ್ಥರು. ನಮ್ಮಲ್ಲಿ ಯಾವುದೇ ಉಪಪಂಗಡ ಇಲ್ಲ ಎಂದು ಕಾಗಿನೆಲೆ ಕನಕಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್, ಕುರುಬರ ಸಂಘ ಹಾಗೂ ಜಿಲ್ಲಾ ಕನಕ ನೌಕರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುರುಬರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಧರ್ಮ ಕಲಂನಲ್ಲಿ ಹಿಂದೂಗಳೆಂದೂ, ಜಾತಿ ಕಲಂನಲ್ಲಿ ಕುರುಬರೆಂದೂ ಬರೆಯಿಸಬೇಕು ಎಂದರು.
ಯಾವುದೇ ಕಾರಣಕ್ಕೂ ಮಕ್ಕಳು ಪೋಷಕರ ಕಣ್ಣಲ್ಲಿ ನೀರು ತರಿಸಬಾರದು. ಅವರ ನೆರವು ಮರೆಯಬಾರದು. ಅಗೌರವ ತೋರುವ ಕೆಲಸ ಮಾಡಬೇಡಿ. ಅವಶ್ಯವಿದ್ದಷ್ಟು ಮಾತ್ರ ಸಾಮಾಜಿಕ ಜಾಲತಾಣ ನೋಡಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ‘ಸಮೀಕ್ಷೆಯಲ್ಲಿ ಧರ್ಮದ ಕಲಂನಲ್ಲಿ ಹಿಂದೂ, ಜಾತಿ ಕಲಂನಲ್ಲಿ ಕುರುಬ ಎಂದು ಬರೆಯಿರಿ. ಬೈರತಿ ಸುರೇಶ್ ಹಾಗೂ ಪ್ರಭಾಕರ್ ಈ ಭಾಗದ ಜನರಿಗೆ ಕೆಲಸ ಮಾಡಿಕೊಡಬೇಕು. ಕೋಲಾರದಲ್ಲಿ ಕನಕ ಭವನ ಅರ್ಧ ಕೆಲಸ ಆಗಿದೆ. ಉಳಿದ ಕೆಲಸ ಆಗಲಿ’ ಎಂದರು.
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ‘ಛಲ ಮತ್ತು ಹೋರಾಟಕ್ಕೆ ಸಂಗೊಳ್ಳಿ ರಾಯಣ್ಣ ಮಾದರಿ, ವಿಶ್ವಪ್ರಜ್ಞೆಗೆ ಕನಕದಾಸರು ಮಾದರಿ ಆಗಿದ್ದಾರೆ. ಶಿಕ್ಷಣಕ್ಕೆ ಅಹಲ್ಯಾಬಾಯಿ ಹೋಳ್ಕರ್ ಮಾದರಿಯಾದರೆ, ಸಾಮಾಜಿಕ ಬದ್ಧತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದರಿಯಾಗಿದ್ದಾರೆ’ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ಹಲವರು ಒಳ್ಳೆಯ ಕೆಲಸ ಮಾಡುತ್ತಿರುತ್ತಾರೆ. ಚೆನ್ನಾಗಿ ಮಾಡುತ್ತಿದ್ದೇನೋ ಇಲ್ಲವೋ ಎಂಬುದನ್ನು ಹೇಳಲು ಒಬ್ಬರು ಇರಬೇಕು. ನಮ್ಮ ಕೆಲಸ ಗುರುತಿಸಿದಾಗ ಮತ್ತಷ್ಟು ಸಾಧನೆಗೆ ಪ್ರೇರಣೆ ಆಗುತ್ತದೆ’ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಟ್ವೆಂಟಿ –20 ಪಂದ್ಯ ಅಲ್ಲ. ಅದೊಂದು ಟೆಸ್ಟ್ ಪಂದ್ಯ. ಸತತ ಪ್ರಯತ್ನ ಇರಬೇಕು. ಜ್ಞಾನಯುತ ವ್ಯಕ್ತಿ ಯಶಸ್ವಿ ಆಗದೇ ಇರಬಹುದು ಆದರೆ ಶಿಸ್ತಿನ ವ್ಯಕ್ತಿಗೆ ಖಂಡಿತ ಯಶಸ್ಸು ಸಿಗದೆ ಇರದು. ಹೀಗಾಗಿ, ಜ್ಞಾನದ ಕೋಟೆ ಕಟ್ಟಿಕೊಳ್ಳಿ. ಯಾರೂ ಅದನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ನಮ್ಮ ಸಮಾಜದ ಪ್ರತಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ಹಾಸ್ಟೆಲ್ ನಿರ್ಮಿಸುತ್ತೇನೆ. ಕುರುಬರ ಸಂಘ ಕಟ್ಟುತ್ತೇನೆ ಎಂದರು.
ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ, ಮಾನವ ಸಂಬಂಧಗಳನ್ನು ತಂತ್ರಜ್ಞಾನ ನಾಶ ಮಾಡುತ್ತಿದೆ. ಮೊಬೈಲ್ನಲ್ಲೇ ಎಲ್ಲಾ ಸಂವಹನ ನಡೆದು ಹೋಗುತ್ತಿದೆ. ನಮ್ಮ ಸಮಾಜಕ್ಕೆ ಇನ್ನೂ ಹಲವು ಕ್ಷೇತ್ರದಲ್ಲಿ ಅವಕಾಶ ಸಿಕ್ಕಿಲ್ಲ. ಅದನ್ನು ಮುಂದಿನ ದಿನಗಳಲ್ಲಿ ಪಡೆಯಬೇಕು. ಯಾರೂ ಚಿನ್ನದ ತಟ್ಟೆಯಲ್ಲಿಟ್ಟು ಏನನ್ನೂ ಕೊಡುವುದಿಲ್ಲ ಎಂದು ಎಚ್ಚರಿಸಿದರು.
ಇನ್ಸೈಟ್ ಸಂಸ್ಥೆ ಜಿ.ಬಿ.ವಿನಯಕುಮಾರ್ ಮಾತನಾಡಿದರು. ಇದೇ ವೇಳೆ ಕುರುಬ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಸಂಘದ ಬಿ.ಎಂ.ನಾರಾಯಣಸ್ವಾಮಿ, ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಕಾಂಗ್ರೆಸ್ ಮುಖಂಡ ಅಂಜನಿ ಸೋಮಣ್ಣ, ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ, ಮಧುಸೂದನ್, ಜನಾರ್ದನ್, ಚಂದ್ರು, ಸಮುದಾಯದ ಮುಖಂಡರು, ಪೋಷಕರು ಹಾಗೂ ಮಕ್ಕಳು ಇದ್ದರು.
ಜೀವನದಲ್ಲಿ ಏನನ್ನಾದರೂ ಸಾಧಿಸಲು ಮೊದಲು ಗುರಿ ಇಟ್ಟು ಕೊಳ್ಳಬೇಕು. ಪ್ರತಿದಿನ ಅದನ್ನು ನೆನಪಿಸಿಕೊಳ್ಳಬೇಕು. ನಾನು ಯುಪಿಎಸ್ಸಿ ಮಾಡಬೇಕೆಂದು ಬರೆದಿಟ್ಟಿದ್ದೆ. ಯಶಸ್ಸು ಸಿಕ್ಕಿತು.ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಹಲವರು ಅಪಸ್ವರ ಎತ್ತುತ್ತಿದ್ದಾರೆ. ಕೆಲ ಜಾತಿಗಳಿಗೆ ತಮ್ಮ ಜಾತಿ ಕಡಿಮೆ ಆಗುತ್ತದೆ ಎಂಬ ಭಯವಿದೆ.ಎಚ್.ಎಂ.ರೇವಣ್ಣ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ
ಬೇರೆ ಯಾರೇ ಇದ್ದರೂ ಸಮೀಕ್ಷೆ ನಡೆಯುತ್ತಿರಲಿಲ್ಲ ರಾಜ್ಯದಲ್ಲಿ ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರೂ ಇದ್ದರೂ ಜಾತಿವಾರು ಸಮೀಕ್ಷೆ ನಡೆಯುತ್ತಿರಲಿಲ್ಲ ಎಂದು ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಬದ್ಧತೆ ಇದೆ. ಆದರೆ ಕೆಲವರ ಹೇಳಿಕೆಗಳಿಂದ ಗೊಂದಲ ಉಂಟಾಗಿದೆ. ಯಾವ ಸಮುದಾಯದ ಎಷ್ಟಿದೆ ಎಂಬುದು ಗೊತ್ತಾಗಬೇಕು. ಅದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಸೌಲಭ್ಯ ಸಿಗಲಿದೆ. ಎಲ್ಲಾ ಕುರುಬರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ತಂದೆ ತಾಯಿಯೇ ನಮ್ಮ ಬಾಸ್ ಕೊಲೆ ಮಾಡಿ ಜೈಲಿಗೆ ಹೋದವ ಬಾಸ್ ಅಲ್ಲ; ತಂದೆ ತಾಯಿಯೇ ನಮ್ಮ ಬಾಸ್ ಎಂದು ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು. ಯಾರೋ ಮೇಕಪ್ ಸ್ಟಾರ್ಗಳಿಗೆ ಲವ್ ಯು ಹೇಳುವ ಚಟ ಬಿಟ್ಟು ತಮ್ಮ ಬದುಕು ಭವಿಷ್ಯಕ್ಕಾಗಿ ತಮ್ಮ ತ್ಯಾಗ ಮಾಡಿದ ಅಪ್ಪ ಅಮ್ಮನಿಗೆ ಲವ್ ಯು ಹೇಳಿ ಎಂದರು.
2028ಕ್ಕೆ 25 ಕುರುಬ ಶಾಸಕರು ಗೆಲ್ಲಬೇಕು ಲಿಂಗಾಯತರು ಒಕ್ಕಲಿಗರ ರೀತಿ ನಮಗೆ ಜಾತಿ ಮೇಲೆ ಪ್ರೀತಿ ಮೋಹ ಇಲ್ಲದಿರುವುದು ಬೇಸರದ ಸಂಗತಿ. 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 25 ಕುರುಬ ಶಾಸಕರು ಗೆಲ್ಲಬೇಕು. ನಮ್ಮ ಸಮಾಜವು ದೇಶ ಹಾಗೂ ರಾಜ್ಯ ಆಳಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.