ADVERTISEMENT

ಎಕ್ಸ್‌ಪ್ರೆಸ್ ಕಾರಿಡಾರ್‌ಗೆ ಕೆರೆ ಮಣ್ಣು: ದೂರು

ಕೆರೆ ರಕ್ಷಣೆ: ತಹಶೀಲ್ದಾರ್‌ಗೆ ರಾಜ್ಯ ರೈತ ಸಂಘ, ಹಸಿರುಸೇನೆ ಕಾರ್ಯಕರ್ತರ ಮನವಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:50 IST
Last Updated 15 ಮಾರ್ಚ್ 2023, 4:50 IST
ಕೆಜಿಎಫ್‌ ತಾಲ್ಲೂಕಿನಲ್ಲಿ ಹೈವೇಗೆ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಕೆಜಿಎಫ್‌ ತಾಲ್ಲೂಕಿನಲ್ಲಿ ಹೈವೇಗೆ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಕೆಜಿಎಫ್‌: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್‌ ರಸ್ತೆಗೆ ಬೇಕಾದ ಮಣ್ಣನ್ನು ಒದಗಿಸಲು ಕೆರೆಗಳಲ್ಲಿ ಮಿತಿ ಮೀತಿ ಮಣ್ಣು ತೆಗೆದಿರುವುದರಿಂದ ಗ್ರಾಮಸ್ಥರು ಜೀವ ಭಯದಲ್ಲಿದ್ದಾರೆ. ಕೂಡಲೇ ಕೆರೆಗಳಿಗೆ ಬೇಲಿ ಹಾಕಿ ರೈತ ಕುಟುಂಬಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಹೈವೇ ಗುತ್ತಿಗೆದಾರರು ಕಾನೂನು ಮೀರಿ ಕೆರೆಗಳಲ್ಲಿ ಮಣ್ಣು ತೆಗೆಯುತ್ತಿದ್ದಾರೆ. ನೇರವಾಗಿ 24 ರಿಂದ 30 ಅಡಿಗಳಷ್ಟು ಆಳದ ಕಂದಕಗಳನ್ನು ಮಾಡಲಾಗಿದೆ. ಇಂತಹ ಕಂದಕಗಳಿಗೆ ಮೇವು ಆರಿಸಿಕೊಂಡು ಬರುವ ಜಾನುವಾರುಗಳು ಮತ್ತು ಮಕ್ಕಳು ಬಿದ್ದರೆ ಬದುಕಿ ಉಳಿಯುವ
ಪರಿಸ್ಥಿತಿಯೇ ಇಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಾನೂನು ಉಲ್ಲಂಘನೆಯ ಅಂಶಗಳನ್ನು ದಾಖಲೆ ಸಮೇತ ನೀಡಿದ್ದರೂ ಅವರು ಮೌನಕ್ಕೆ ಶರಣಾಗಿದ್ದಾರೆ. ಗುತ್ತಿಗೆದಾರರ ಜತೆ ಶಾಮೀಲಾಗಿದ್ದಾರೆ ಎಂದು ದೂರಲಾಯಿತು.

ಬಂಗಾರು ತಿರುಪತಿ ದೇವಸ್ಥಾನದ ಹಿಂಭಾಗದಲ್ಲಿ ಕಲ್ಲಿನ ಪುಡಿ ಮಾಡುವ ಕ್ರಷರ್‌ಗಳನ್ನು ನಿರ್ಮಿಸಿರುವುದರಿಂದ, ದೇವಾಲಯದಲ್ಲಿ ದೂಳು ತುಂಬುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ರೇಷ್ಮೆ ಬೆಳೆ ನೆಲಕಚ್ಚಿದೆ ಎಂದು ಮುಖಂಡರು ಆರೋಪಿಸಿದರು.

ADVERTISEMENT

ಹೈವೇಗೆ ಮಣ್ಣು ಸಾಗಿಸುವ ಗುತ್ತಿಗೆದಾರರು ಈಗ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗೆ ಮಾರಾಟ ಮಾಡಿಕೊಂಡು ಹಣ ಮಾಡುತ್ತಿದ್ದಾರೆ. ಈ ಎಲ್ಲಾ ಕೃತ್ಯಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸುಮ್ಮನಿದ್ದಾರೆ. ಕೂಡಲೇ ಅಕ್ರಮ ಮಣ್ಣು ಸಾಗಾಣಿಕೆ ನಿಲ್ಲಿಸದೆ ಇದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.

ಹೈವೇಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲಿಯೇ ಕರೆದು ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ತಹಶೀಲ್ದಾರ್ ಶ್ರೀನಿವಾಸ್ ಆಶ್ವಾಸನೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹುಲ್ಕೂರು ಹರಿಕುಮಾರ್‌, ಮುಖಂಡ ಮುನಿರತ್ನಂ ರೆಡ್ಡಿ, ಜಿ.ಎನ್.ಸುಬ್ರಹ್ಮಣಿ, ಗೋಪಾಲಪ್ಪ, ಗಣೇಶ್‌, ನವೀನ್‌, ದೊಡ್ಡಕಾರಿ ಸುಬ್ರಹ್ಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.