
ಕೋಲಾರ: ಜಿಲ್ಲೆಯ ನರಸಾಪುರ ಹೋಬಳಿಯ ಗರುಡನಪಾಳ್ಯದ 21.16 ಎಕರೆ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಸೋಮವಾರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ಆ ಪಕ್ಷದ ಮುಖಂಡರಾದ ವಿ.ವಿಜಯಕುಮಾರ್ ಹಾಗೂ ಎಸ್.ಎಂ.ಅನಿಲ್ ಕುಮಾರ್ ಸೋಮವಾರ ನಗರದ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ವಕೀಲರೊಂದಿಗೆ ಬಂದು ಡಿವೈಎಸ್ಪಿ ವೆಂಕಟೇಶ್ ಅವರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದಾರೆ.
ಕೃಷ್ಣಬೈರೇಗೌಡರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಲೋಕಾಯುಕ್ತದಲ್ಲಿ ಕ್ರಮ ಆಗದಿದ್ದರೆ ನ್ಯಾಯಾಲಯ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಗರುಡನಪಾಳ್ಯದ ಸರ್ವೆ ಸಂಖ್ಯೆ 46 ಹಾಗೂ 47ರಲ್ಲಿ ಒಟ್ಟು 21.16 ಎಕರೆ ಕೆರೆ ಮತ್ತು ಸ್ಮಶಾನದ ಜಮೀನನ್ನು ಸಚಿವರು ಕಬಳಿಸಿರುವ ಸಚಿವರು ತಮ್ಮ ಹಾಗೂ ಕುಟುಂಬದ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕೆರೆ ಇರುವ ಸರ್ವೆ ಸಂಖ್ಯೆ 46ರಲ್ಲಿ 20.16 ಎಕರೆ ಹಾಗೂ ಸ್ಮಶಾನವಿರುವ ಸರ್ವೆ ಸಂಖ್ಯೆ 47ರಲ್ಲಿ 1 ಎಕರೆ ಜಾಗದ ಮೂಲ ದಾಖಲೆಗಳನ್ನು ತಿರುಚಲಾಗಿದೆ. ಇದರಲ್ಲಿ ಕೋಲಾರ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಭೂ ಕಬಳಿಕೆ ಮಾಡಿದ್ದಾರೆ ಎಂದು ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶಗೌಡ ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಪೂರಕ ದಾಖಲೆ ಬಿಡುಗಡೆ ಮಾಡಿದ್ದರು.
ಈ ಸಂಬಂಧ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಸ್ತಾಪ ಮಾಡಿ ತನಿಖೆಗೆ ಆಗ್ರಹಿಸಿದ್ದರು. ತಮ್ಮ ಮೇಲಿನ ಆರೋಪ ಸಂಬಂಧ ಸಚಿವರು ವಿವರವಾಗಿ ಉತ್ತರ ನೀಡಿ ‘ಇದು ಪಿತ್ರಾರ್ಜಿತ ಆಸ್ತಿ. ಯಾವುದೇ ತನಿಖೆಗೆ ಸಿದ್ಧ’ ಎಂದು ಹೇಳಿದ್ದರು.
ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತಿರುವುದಾಗಿ ಹೇಳುವ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧವೇ ಭೂ ಕಬಳಿಕೆ ಆರೋಪವಿದೆ. ಈ ಅನುಮಾನ ಬಗೆಹರಿಸಿಕೊಳ್ಳಲು ಸಮಗ್ರ ತನಿಖೆ ನಡೆಯಬೇಕು. ಯಾರು ದಾಖಲೆ ಸೃಷ್ಟಿ ಮಾಡಿದ್ದಾರೆ? ಯಾರೆಲ್ಲಾ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗಬೇಕು. ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ ಆಗ್ರಹಿಸಿದರು.
ಲೋಕಾಯುಕ್ತ ಕಚೇರಿ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗರುಡನಪಾಳ್ಯದ ಸರ್ವೆ ಸಂಖ್ಯೆ 46 ಹಾಗೂ 47ರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಖಾತೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗೆ ಈ ಹಿಂದೆ ದೂರು ನೀಡಿದ್ದೆವು. ಆದರೆ, ಈ ವರೆಗೆ ಅವರು ಯಾವುದೇ ಕ್ರಮ ವಹಿಸಿಲ್ಲ. ದಾಖಲೆ ತಿರುಚಬಹುದೆಂದು ಆರೋಪ ಬಂದ ನಂತರ ಕೋಲಾರ ತಹಶೀಲ್ದಾರ್ ಕಚೇರಿ ಬಾಗಿಲಿಗೆ ಕಾವಲು ಕೂಡ ಕುಳಿತಿದ್ದೆವು. ಸಚಿವರು ನ್ಯಾಯಯುತವಾಗಿ ಜಮೀನು ಪಡೆದಿದ್ದರೆ ಆ ಸಂಬಂಧಿಸಿದ ದಾಖಲೆ ಬಿಡುಗಡೆ ಮಾಡಲಿ’ ಎಂದರು.
ಪ್ರಕರಣ ದಾಖಲಿಸಿಕೊಂಡು ಕೃಷ್ಣಬೈರೇಗೌಡ ಅವರನ್ನು ಬಂಧಿಸಬೇಕು. ಲೋಕಾಯುಕ್ತದಲ್ಲೂ ಯಾವುದೇ ಕ್ರಮ ಆಗಿಲ್ಲವೆಂದರೆ ನ್ಯಾಯಾಲಯ ಮೊರೆ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗರುಡನಪಾಳ್ಯದಲ್ಲಿರುವ ಸರ್ವೆ ಸಂಖ್ಯೆ 46 ಹಾಗೂ 47 ಸರ್ಕಾರಿ ಜಾಗ, ಬಿ ಖರಾಬು. ಭೂ ಕಬಳಿಕೆ ಆಗಿದ್ದು, ನಮ್ಮ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತರಿಗೆ ನೀಡಿದ್ದೇವೆ. ಮಹಾರಾಜರಿಂದ ಬಂದಿದ್ದು, ಪಿತ್ರಾರ್ಜಿತ ಆಸ್ತಿ ಎನ್ನುವ ಕೃಷ್ಣಬೈರೇಗೌಡರು ತಮ್ಮ ಬಳಿ ಏನಾದರೂ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ ಎಂದು ದೂರುದಾರ, ಬಿಜೆಪಿ ಮುಖಂಡ ವಿ.ವಿಜಯಕುಮಾರ್ ಒತ್ತಾಯಿಸಿದರು.
ಕೃಷ್ಣಬೈರೇಗೌಡರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಆಗ್ರಹಿಸಿದರು.
ಮತ್ತೊಬ್ಬ ದೂರುದಾರ ಎಸ್.ಎಂ.ಅನಿಲ್ ಕುಮಾರ್, ಹೈಕೋರ್ಟ್ ವಕೀಲ ಶ್ರೀನಿವಾಸ್ ಹಾಗೂ ಬಿಜೆಪಿ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.