ಕೋಲಾರ:ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡರು ಕಾಂಗ್ರೆಸ್ ಸೇರುತ್ತಾರೆ ಎಂದು ಕ್ಷೇತ್ರದಲ್ಲಿ ಹರಿದಾಡುತ್ತಿದ್ದ ಊಹಾಪೋಹಕ್ಕೆ ತೆರೆ ಎಳೆದ ಶ್ರೀನಿವಾಸಗೌಡರು, ‘ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ’ ಎಂದು ಬಹಿರಂಗವಾಗಿ ಘೋಷಿಸಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇವೇಗೌಡರು ಮತ್ತು ಅವರ ಮಕ್ಕಳು ಬಹಳ ದೊಡ್ಡವರು. ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ. ನಾನು 4 ಬಾರಿ ಬೇರೆ ಬೇರೆ ಪಕ್ಷದಿಂದ ಗೆದ್ದು ಶಾಸಕನಾಗಿದ್ದೇನೆ. ಜೆಡಿಎಸ್ನಿಂದ ಉಚ್ಛಾಟನೆ ಮಾಡಿರೋದು ಸಂತೋಷ’ ಎಂದು ಕುಟುಕಿದರು.
‘ಕಾಂಗ್ರೆಸ್ಗೆ ಸೇರ್ಪಡೆಯಾಗುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರ ಬಳಿ ಚರ್ಚಿಸಿದ್ದು, ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದೆ. ಆಗ ಕಾಂಗ್ರೆಸ್ನ ಒಬ್ಬ ಮಹಾನುಭಾವ ಪಕ್ಷದಿಂದ ಉಚ್ಛಾಟನೆ ಮಾಡಿಸಿದ್ದ. ಈಗ ಆ ಮಹಾನುಭಾವ ಹೆಸರಿಗೆ ಇಲ್ಲದಂತೆ ಹೋಗಿದ್ದಾನೆ. ಜನ ಸಹ ಆತನನ್ನು ಮರೆತಿದ್ದಾರೆ. ಆತನ ಹೆಸರೇಳಲು ನಾಚಿಕೆಯಾಗುತ್ತೆ’ ಎಂದು ಪರೋಕ್ಷವಾಗಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ವಿರುದ್ಧ ಹರಿಹಾಯ್ದರು.
‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ ನೀರು ತಂದ ಶಾಸಕರಾದ ರಮೇಶ್ಕುಮಾರ್ ಹಾಗೂ ಕೃಷ್ಣ ಬೈರೇಗೌಡರು ಮಹಾನುಭಾವರು. ನಾನು ಅವರನ್ನು ಹೊಗಳಿದ್ದಕ್ಕೆ ಕುಮಾರಸ್ವಾಮಿಗೆ ಬಾಧೆಯಾಗಿದೆ. ಕೆ.ಸಿ ವ್ಯಾಲಿಯದು ಕೊಚ್ಚೆ ನೀರೆಂದು ಕುಮಾರಸ್ವಾಮಿ ಹೇಳಿದ್ದಾರೆ. ಅದೇ ಕೊಚ್ಚೆ ನೀರು ನಾನು ಕುಡಿದಿಲ್ವಾ? ನಾನು ಸತ್ತೋಗಿದ್ದಿನಾ?’ ಎಂದು ಪ್ರಶ್ನಿಸಿದರು.
ಅಧಿಕಾರ ಬೇಕು: ‘ನಾನು ಒಬ್ಬ ಶಾಸಕ ಎಂಬುದಕ್ಕಿಂತ ಮೊದಲು ರೈತನ ಮಗ. ದೇವೇಗೌಡರ ಕುಟುಂಬವೇ ರೈತರ ಕುಟುಂಬ. ಅವರು ಏಕೆ ರಮೇಶ್ಕುಮಾರ್ ಬಗ್ಗೆ ಲಘುವಾಗಿ ಮಾತನಾಡಬೇಕು? ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರ ಬೇಕು. ಜೆಡಿಎಸ್ ಪಕ್ಷ ಅವರ ಕುಟುಂಬಕ್ಕೆ ಮಾತ್ರ ಸೀಮಿತನಾ?’ ಎಂದು ಗುಡುಗಿದರು.
‘ಕುಮಾರಸ್ವಾಮಿ ಬಾಯಿ ಬಿಟ್ಟರೆ ತಮ್ಮದು ರೈತರ ಕುಟುಂಬವೆಂದು ಹೇಳಿಕೊಳ್ತಾರೆ. ಅವರು 2 ಬಾರಿ ಮುಖ್ಯಮಂತ್ರಿ ಆದಾಗ ಕೋಲಾರ ಜಿಲ್ಲೆಗೆ ಕೊಚ್ಚೆ ನೀರಿನ ಬದಲು ಒಳ್ಳೆಯ ನೀರು ಕೊಡಬಹುದಿತ್ತು. ಅವರಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿಯಿಲ್ಲ. ಅವರ ಜಿಲ್ಲೆ ಮಾತ್ರ ಅವರಿಗೆ ಸೀಮಿತ’ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.