ADVERTISEMENT

ಮಾರ್ಚ್‌ 27ಕ್ಕೆ ಲೋಕ ಅದಾಲತ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 12:36 IST
Last Updated 15 ಫೆಬ್ರುವರಿ 2021, 12:36 IST

ಕೋಲಾರ: ‘ನ್ಯಾಯಾಲಯಕ್ಕೆ ಕಕ್ಷಿದಾರರ ಅಲೆದಾಟ ತಪ್ಪಿಸಲು ಮಾರ್ಚ್ 27ರಂದು ಮೆಗಾ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್‌.ರಘುನಾಥ್ ತಿಳಿಸಿದರು.

ಇಲ್ಲಿ ಸೋಮಚಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅದಾಲತ್‌ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕಕ್ಷಿದಾರರು ಅದಾಲತ್‌ನ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಲೋಕ ಅದಾಲತ್‌ನಲ್ಲಿ ಒಬ್ಬ ನ್ಯಾಯಾಧೀಶರು ಮತ್ತು ಒಬ್ಬ ವಕೀಲರು ಸೇರಿ ಪ್ರಕರಣಗಳ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡುತ್ತಾರೆ. ಸಿವಿಲ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಹಣಕಾಸು, ಕಾರ್ಮಿಕ, ಅಕ್ರಮ ಮರಳು ಸಾಗಾಣಿಕೆ, ಮನೆ ಬಾಡಿಗೆ ವಿವಾದ, ಕೌಟುಂಬಿಕ ಕಲಹ, ಭೂಸ್ವಾಧೀನ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಆಗುವಂತಹ ಪ್ರಕರಣಗಳನ್ನು 2 ಕಡೆಯ ಕಕ್ಷಿದಾರರಿಗೆ ನ್ಯಾಯ ಸಿಗುವಂತೆ ಕಕ್ಷಿದಾರರ ಒಪ್ಪಿಗೆ ಮೇರೆಗೆ ಇತ್ಯರ್ಥಪಡಿಸಲಾಗುತ್ತದೆ. ಕಕ್ಷಿದಾರರು ಪಾವತಿಸಿದ ನ್ಯಾಯಾಲಯದ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 44,570 ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಈ ಪೈಕಿ ರಾಜಿ ಆಗಬಹುದಾದ 14,809 ಪ್ರಕರಣ ಗುರುತಿಸಲಾಗಿದೆ. ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಅದಾಲತ್‌ನಲ್ಲಿ ನ್ಯಾಯ ವಿಳಂಬವಾಗದೆ ಶೀಘ್ರವಾಗಿ ದೊರೆಯುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.