
ಮಾಲೂರು: ಪತ್ನಿ ಜೊತೆ ಅಕ್ರಮ ಸಂಬಂಧ ಕಾರಣ ಜಗಳ ನಡೆದಿದ್ದು, ತನ್ನ ಸೋದರ ಮಾವನನ್ನು ವ್ಯಕ್ತಿಯು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮಿಟಿಕಾನಹಳ್ಳಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ನಯಾಜ್ ಖಾನ್ (38) ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಶಾಹಿದ್ ಖಾನ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಾಹಿದ್ ತಾಯಿಯ ತಮ್ಮ ನಯಾಜ್ ಖಾನ್.
ಆರೋಪಿ ಶಾಹಿದ್ ಹೊಸಕೋಟೆಯನಾಗಿದ್ದು, ಟೇಕಲ್ ಬಳಿಯ ಮಿಟಿಕಾನಹಳ್ಳಿ ಗ್ರಾಮದ ಬಳಿ ವಹಾಬ್ ಖಾನ್ ಎಂಬುವರ ಜಮೀನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಈತನ ಸಂಸಾರ ಹೊಸಕೋಟೆಯಲ್ಲಿಯೇ ಇತ್ತು. ನಯಾಜ್ ತನ್ನ ಪತ್ನಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಎಂಬ ಕಾರಣಕ್ಕೆ ಶಾಹಿದ್ ತನ್ನ ಸಂಸಾರವನ್ನು ಈಚೆಗೆ ಮಿಟಿಕಾನಹಳ್ಳಿಗೆ ವರ್ಗಾಯಿಸಿದ್ದ. ಆದರೂ ಬಿಡದ ನವಾಜ್ ಖಾನ್ ಬುಧವಾರ ಮಧ್ಯಾಹ್ನ ಆಟೋ ಮಾಡಿಕೊಂಡು ಶಾಹಿದ್ ಮನೆ ಬಳಿಗೆ ಬಂದಿದ್ದಾನೆ. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ಆರೋಪಿ ಶಾಹಿದ್ ಖಾನ್ ತನ್ನ ಸೋದರ ಮಾವ ನವಾಜ್ ಖಾನ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾಸ್ತಿ ಸರ್ಕಲ್ ಇನ್ಸ್ಪೆಕ್ಟರ್ ಓಂಪ್ರಕಾಶ್ ಗೌಡ ಪ್ರಕರಣ ದಾಖಲಿಸಿಕೊಂಡು, ಆರೋಪಿ ಶಾಹಿದ್ ಖಾನ್ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.