
ಮಾವು
ಕೋಲಾರ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮಾವು ಮಾರಾಟ ಮಾಡಿದ್ದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಸುಮಾರು 380 ಮಾವು ಬೆಳೆಗಾರರಿಗೆ ಇನ್ನೂ ಖಾತೆಗೆ ಹಣ ಬಂದಿಲ್ಲ.
ಈಗಾಗಲೇ 15 ಸಾವಿರಕ್ಕೂ ಅಧಿಕ ರೈತರಿಗೆ ₹ 41 ಕೋಟಿ ಪಾವತಿಯಾಗಿದ್ದು, ಇನ್ನೂ ₹ 1.32 ಕೋಟಿ ಕೆಲ ಮಾವು ಬೆಳೆಗಾರರ ಖಾತೆಗೆ ಹೋಗಬೇಕಿದೆ.
ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿಳಂಬವಾಗಿರುವುದಾಗಿ ಮಾವು ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲ ರೈತರು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಕೊಂಡಿಲ್ಲ. 380 ಬೆಳೆಗಾರರ ಪೈಕಿ 135 ಮಂದಿಯದ್ದು ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಇವರು ಸರಿಯಾಗಿ ದಾಖಲೆ ಸಲ್ಲಿಸಿಲ್ಲ ಎಂಬುದು ಗೊತ್ತಾಗಿದೆ. ಉಳಿದವರ ಖಾತೆಗೆ ಸದ್ಯದಲ್ಲೇ ಹಣ ಸೇರಲಿದೆ.
ಕಳೆದ ವರ್ಷ ಬೆಲೆ ತೀವ್ರವಾಗಿ ಕುಸಿದಿದ್ದರಿಂದ ಮಾವಿನ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ಜಿಲ್ಲೆಯಲ್ಲಿ 16,270 ಮಾವು ಬೆಳೆಗಾರರು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 15,350 ಬೆಳೆಗಾರರು ಮಾರಾಟ ಮಾಡಿ ಬಿಲ್ ಸಲ್ಲಿಸಿದ್ದರು.
ಆ ಪ್ರಕಾರವಾಗಿ 1.12 ಲಕ್ಷ ಮೆಟ್ರಿಕ್ ಟನ್ ಮಾವನ್ನು (ವಿಶೇಷವಾಗಿ ತೋತಾಪುರಿ) ಎಪಿಎಂಸಿ ಮೂಲಕ ಮಾರಾಟ ಮಾಡಲಾಗಿತ್ತು. ಜುಲೈ 24ರಂದು ನೋಂದಣಿ ಕಾರ್ಯ ಮುಗಿದಿತ್ತು. ಜುಲೈ 26ಕ್ಕೆ ಮಾವು ಮಾರಾಟ ಮಾಡಿದ ಬಿಲ್ ಸಲ್ಲಿಕೆ ಮಾಡಿದ್ದರು. ಎರಡು ಜಿಲ್ಲೆಗಳಿಗೆ ಒಟ್ಟು ₹ 42.32 ಕೋಟಿ ನಿಗದಿಪಡಿಸಲಾಗಿತ್ತು. ಇದರಲ್ಲಿ ₹ 41 ಕೋಟಿ ಹಣ ಮಾವು ಮಾರಾಟ ಮಾಡಿರುವ ಬೆಳೆಗಾರರ ಖಾತೆಗೆ ಹೋಗಿದೆ.
ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಪ್ರತಿ ರೈತರಿಂದ ಖರೀದಿಸಲು ಸರ್ಕಾರ ಆದೇಶಿಸಿತ್ತು. ಮಾವು ಧಾರಣೆ ಕುಸಿತದಿಂದ ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಕೆ.ಜಿಗೆ ₹ 4 ಬೆಂಬಲ ಬೆಲೆ ಘೋಷಿಸಿತ್ತು. 1 ಕ್ವಿಂಟಲ್ಗೆ ₹ 404 ಸಿಗುತ್ತದೆ.
‘ಮಾರಾಟ ಮಾಡಿದ ಬಾಕಿ ನನಗೂ ಬರಬೇಕಿದ್ದು, ಐದಾರು ಬಾರಿ ಕಚೇರಿಗೆ ತಿರುಗಾಡಿದ್ದೇನೆ. ಮೂರು ದಿನಗಳಲ್ಲಿ ಖಾತೆಗೆ ಹಣ ಹಾಕುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದು ತೊಟ್ಲಿ ಗ್ರಾಮದ ಮಾವು ಬೆಳೆಗಾರ ಟಿ.ವಿ.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ವರ್ಷ ಈಗಾಗಲೇ ಮಾವಿನ ಹೂವು ಬಿಟ್ಟಿದ್ದು, ಬೇಗನೇ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಮಾವು ಬೆಳೆಗಾರರು ಒತ್ತಾಯಿಸಿದ್ದಾರೆ.
---
ತೋಟಗಾರಿಕೆ ಇಲಾಖೆಯಿಂದ ಎಲ್ಲಾ ಪ್ರತಿಕ್ರಿಯೆ ಆಗಿದೆ. ಬಹುತೇಕ ರೈತರ ಖಾತೆಗೆ ಮಾವು ಮಂಡಳಿಯಿಂದ ಹಣ ಸೇರಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಬಾಕಿ ಇದೆ.
-ಎಸ್.ಆರ್.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಕೋಲಾರ
ಮೂರು ದಿನಗಳಲ್ಲಿ ಮಾವು ಬೆಳೆಗಾರರ ಖಾತೆಗೆ ಹಣ ಜಮೆ ಆಗಲಿದೆ. ಆದರೆ ತಾಂತ್ರಿಕ ಸಮಸ್ಯೆ ಇರುವುದು ತುಸು ತಡವಾಗಲಿದೆ. ಕೆಲವರು ತಮ್ಮ ಬ್ಯಾಂಕ್ ಖಾತೆ ಆಧಾರ್ ಸೀಡಿಂಗ್ ಮಾಡಬೇಕಿದೆ.
-ಎಂ.ಮಂಜುನಾಥ್ ಸಹಾಯಕ ನಿರ್ದೇಶಕ ಮಾವು ಅಭಿವೃದ್ಧಿ ಮಂಡಳಿ.
----
ಜಿಲ್ಲಾಧಿಕಾರಿ ಸ್ಪಂದನೆ ಪ್ರಯತ್ನ
ಕಳೆದ ವರ್ಷ ಮಾವಿನ ಧಾರಣೆ ಕುಸಿತದ ಕಾರಣ ಬೆಂಬಲ ಬೆಲೆ ನೀಡುವಂತೆ ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಅದಕ್ಕೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ಎಂ.ಆರ್.ರವಿ ಪತ್ರ ವ್ಯವಹಾರ ನಡೆಸಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಬಳಿಕ ರಾಜ್ಯ ಸರ್ಕಾರ ಕೇಂದ್ರದ ಜೊತೆ ಚರ್ಚಿಸಿ ಮಾವು ಬೆಳೆಗಾರರ ಕೈಹಿಡಿದಿತ್ತು. ನಂತರ ಪ್ರತಿ ಎಕರೆಗೆ 40 ಕ್ವಿಂಟಲ್ನಂತೆ ಗರಿಷ್ಠ 5 ಎಕರೆಗೆ 200 ಕ್ವಿಂಟಲ್ವರೆಗೆ ಖರೀದಿಸಬೇಕೆಂದು ಜಿಲ್ಲಾಧಿಕಾರಿ ಕೋರಿದ್ದರು. ಆಗ ಮಿತಿ ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.