
ಮಾಲೂರು: ಶಾಸಕ ಕೆ.ವೈ.ನಂಜೇಗೌಡ ಅಭಿಮಾನಿಗಳ ಬಳಗದ ವತಿಯಿಂದ ಮಾರಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಸಾವಿರದ ಒಂದು ತೆಂಗಿನಕಾಯಿ ಈಡುಗಾಯಿ ಒಡೆಯಲಾಯಿತು.
ಈ ವೇಳೆ ದರಕಾಸ್ತು ಸಮಿತಿ ಸದಸ್ಯ ನಾಗಪುರ ನವೀನ್ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ 248 ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡರು, ಮರು ಮತಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಮರುಮತ ಎಣಿಕೆಗೆ ಆದೇಶಿಸಿದ ಹಿನ್ನೆಲೆ ಜಿಲ್ಲಾಡಳಿತದಲ್ಲಿ ವ್ಯವಸ್ಥಿತವಾಗಿ ಮರು ಮತ ಎಣಿಕೆ ನಡೆಯಿತು. ಇದರಲ್ಲಿ ಮೂರು ಮತಗಳು ಹೆಚ್ಚಾಗಿ ಬಂದು ನಂಜೇಗೌಡ ಅವರು ಗೆಲುವು ಸಾಧಿಸಿದ್ದಾರೆ. ಹಾಗಾಗಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯಲಾಯಿತು’ ಎಂದರು.
‘ಮರುಮತ ಎಣಿಕೆಯಲ್ಲಿ ಮಾಜಿ ಶಾಸಕರಿಗೆ ಮುಖಭಂಗವಾಗಿದೆ. ತಾಲ್ಲೂಕಿನ ಜನತೆಗಿದ್ದ ಗೊಂದಲ ಬಗೆಹರಿದಿದೆ ಎಂದರು.
ಅಭಿಮಾನಿ ಬಳಗದ ವತಿಯಿಂದ ದೇವಾಲಯದಲ್ಲಿ ಪೂಜೆ ನಂತರ ಸಿಹಿ ಹಂಚಿ, ಅನ್ನ ಸಂತರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಸುನಿಲ್ ನಂಜೇಗೌಡ, ಹರೀಶ್ ಗೌಡ, ಷಣ್ಮುಖ, ರೋಹಿತ್ ನಾರಾಯಣ್, ರವಿನಂದನ್ ಬಾಬು, ತನ್ವೀರ್ ಅಹಮದ್, ಎನ್.ಗೌಡ, ಪ್ರಕಾಶ್, ಲೋಕೇಶ್, ಉದಯ್, ಎಂ.ಎಸ್.ಪ್ರದೀಪ್, ಮಣಿಶೆಟ್ಟಹಳ್ಳಿ ನವೀನ್, ರೂಪೇಶ್, ಚಂದು, ಅಭಿಮಂಜು, ಮಹಾಲಕ್ಷ್ಮಿ, ಲತಾಬಾಯಿ, ಅಕ್ಷಯ್, ಉಪ್ಪಾರಹಳ್ಳಿ ಅಂಬರೀಶ್ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.