ADVERTISEMENT

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ ತಡೆ ನಾಳೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 4:57 IST
Last Updated 5 ಫೆಬ್ರುವರಿ 2021, 4:57 IST
ವಡ್ಡಹಳ್ಳಿಯ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ರೈತ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ವಡ್ಡಹಳ್ಳಿಯ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ರೈತ ಸಂಘದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು   

ಮುಳಬಾಗಿಲು: ದೆಹಲಿಯಲ್ಲಿ ಹೋರಾಟನಿರತ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಫೆ. 6ರಂದು ಎನ್. ವಡ್ಡಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಜನಾಭಿಪ್ರಾಯವಿಲ್ಲದ ಕೃಷಿ ಕಾಯ್ದೆಗಳ ವಿರುದ್ಧ ಸತತವಾಗಿ ಎರಡು ತಿಂಗಳಿಂದ ಶಾಂತಿಯುತ ಹೋರಾಟದ ಮೂಲಕ ಸರ್ಕಾರದ ಗಮನಕ್ಕೆ ತಂದರೂ ನೆಪಮಾತ್ರಕ್ಕೆ ರೈತರ ಜೊತೆ ಮಾತುಕತೆ ನಡೆಸಿದೆ. ಮಾತುಕತೆ ವಿಫಲವಾದ ಕಾರಣ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಚಲೋ ಹೊರಟಿದ್ದ ರೈತರನ್ನು ದಿಕ್ಕುತಪ್ಪಿಸಲು ಷಡ್ಯಂತ್ರ ನಡೆಸಲಾಯಿತು. ರೈತರನ್ನು ನಕಲಿ ರೈತರು, ದೇಶದ್ರೋಹಿಗಳು, ಪಾಕಿಸ್ತಾನ ಮತ್ತು ಚೀನಾದ ಜೊತೆ ಸಂಬಂಧವಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ದೂರಿದರು.

ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ದೇಶದ ಕೃಷಿ ಭೂಮಿ, ಉತ್ಪಾದನೆ, ಮಾರುಕಟ್ಟೆ, ಚಿಲ್ಲರೆ ವ್ಯಾಪಾರವನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಹೊರಟಿದೆ. ಇಡೀ ಕೃಷಿ ಕ್ಷೇತ್ರವನ್ನೇ ನಾಶ ಮಾಡಿ ಆಹಾರ ಭದ್ರತೆಯ ಅಭಾವ ಸೃಷ್ಟಿಸಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಫಾರೂಕ್‌ ಪಾಷಾ, ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ರಾಜ್ಯ ಸಂಚಾಲಕರಾದ ಬಂಗವಾದಿ ನಾಗರಾಜಗೌಡ, ನಲ್ಲಾಂಡಹಳ್ಳಿ ಕೇಶವ, ವಿಜಯಪಾಲ್, ಅಣ್ಣಿಹಳ್ಳಿ ನಾಗರಾಜ್, ವೆಂಕಟರವಣಪ್ಪ, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪುತ್ತೇರಿ ರಾಜು, ನವೀನ್, ವೇಣು, ಗಜೇಂದ್ರ, ನಂಗಲಿ ಕಿಶೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.