ಕೋಲಾರ: ‘ವಿಶ್ವದಾದ್ಯಂತ ಶುಕ್ರವಾರ (ಏ.1)ನಡೆಯುವ ಪರೀಕ್ಷಾ ಪೇ ಚರ್ಚಾ 5ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸುತ್ತಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ತಿಳಿಸಿದರು.
ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳಿಂದ ಪರೀಕ್ಷೆಯ ಒತ್ತಡ ಮತ್ತು ಸಂಬಂಧಿತ ಪ್ರಶ್ನೆಗಳಿಗೆ ಪ್ರಧಾನಮಂತ್ರಿಯವರು ಅನನ್ಯವಾಗಿ ತೊಡಗಿಸಿಕೊಳ್ಳುವ ಶೈಲಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
‘ರಾಜ್ಯಪಾಲರ ಸಮ್ಮುಖದಲ್ಲಿ ನಡೆಯುವ ಈ ಕಾರ್ಯಕ್ರಮ ವೀಕ್ಷಿಸಲು ದೇಶದಾದ್ಯಂತ ಆಯ್ಧ ವಿದ್ಯಾರ್ಥಿಗಳು ರಾಜಭವನಕ್ಕೆ ಭೇಟಿ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಒತ್ತಡರಹಿತ ಪರೀಕ್ಷೆ ಖಚಿತಪಡಿಸಿಕೊಳ್ಳಲು, ಯುವಕರಿಗೆ ಒತ್ತಡರಹಿತ ವಾತಾವರಣಕ್ಕೆ ಕಾರ್ಯಕ್ರಮ ಸಹಕಾರಿಯಾಗಲಿದೆ. ಪ್ರತಿ ಮಗುವಿನ ವಿಶಿಷ್ಟ ವ್ಯಕ್ತಿತ್ವ ವಿಕಸನಕ್ಕೆ, ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕಾರ್ಯಕ್ರಮ ಪೂರಕವಾಗಿದೆ’ ಎಂದರು.
‘ದೇಶ ವಿದೇಶದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸ್ಪರ್ಧೆಗಳ ಮೂಲಕ ಆಯ್ಕೆಯಾಗಿ ಭಾಗವಹಿಸುವವರಿಗೆ ಪ್ರಶಂಸಾ ಪತ್ರ ಮತ್ತು ಪ್ರಧಾನ ಮಂತ್ರಿಯವರು ಬರೆದ ಪರೀಕ್ಷಾ ವಾರಿಯರ್ಸ್ ಪುಸ್ತಕ ಒಳಗೊಂಡ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ನೀಡಲಾಗುತ್ತದೆ’ ಎಂದು ವಿವರಿಸಿದರು.
‘ದೂರದರ್ಶನ (ಡಿ.ಡಿ ನ್ಯಾಷನಲ್, ಡಿ.ಡಿ ನ್ಯೂಸ್, ಡಿ.ಡಿ ಇಂಡಿಯಾ), ರೇಡಿಯೋ ಚಾನೆಲ್, ವಾಹಿನಿಗಳು, ಎಡುಮಿನೋಫ್ ಇಂಡಿಯಾದ ಯೂಟ್ಯೂಬ್ ಚಾನೆಲ್ಗಳು, ಮೈಗೋ ಇಂಡಿಯಾ, ರಾಜ್ಯಸಭಾ ಚಾನೆಲ್ ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.