ADVERTISEMENT

ಕೋಲಾರ | ಕೋವಿಡ್–19 ಲಾಕ್‌ಡೌನ್ ಸಂಕಷ್ಟದಲ್ಲೂ ಪಿಂಚಣಿ ಸ್ಥಗಿತ: ಫಲಾನುಭವಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 16 ಮೇ 2020, 13:24 IST
Last Updated 16 ಮೇ 2020, 13:24 IST
ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಬಿಡುಗಡೆಗೆ ಒತ್ತಾಯಿಸಿ ಫಲಾನುಭವಿಗಳು ಕೋಲಾರ ತಾಲ್ಲೂಕಿನ ಕ್ಯಾಲನೂರು ಅಂಚೆ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.
ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಬಿಡುಗಡೆಗೆ ಒತ್ತಾಯಿಸಿ ಫಲಾನುಭವಿಗಳು ಕೋಲಾರ ತಾಲ್ಲೂಕಿನ ಕ್ಯಾಲನೂರು ಅಂಚೆ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.   

ಕೋಲಾರ: ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನ ಹಾಗೂ ಸಂಧ್ಯಾ ಸುರಕ್ಷಾ ವೇತನವನ್ನು ಐದಾರು ತಿಂಗಳಿನಿಂದ ನೀಡಿಲ್ಲ ಎಂದು ಆರೋಪಿಸಿ ಫಲಾನುಭವಿಗಳು ತಾಲ್ಲೂಕಿನ ಕ್ಯಾಲನೂರು ಅಂಚೆ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು.

‘ಲಾಕ್‌ಡೌನ್ ಸಂಕಷ್ಟದ ನಡುವೆಯೂ ಸರ್ಕಾರ ವಿವಿಧ ಪ್ಯಾಕೇಜ್ ಘೋಷಿಸಿ ಜನರಿಗೆ ನೆರವಾಗುತ್ತಿದೆ. ಆದರೆ, ಸಾಮಾಜಿಕ ಭದ್ರತಾ ಪಿಂಚಣಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಜೀವನ ನಿರ್ವಹಣೆಗೆ ಕಷ್ಟವಾಗಿದೆ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಪಿಂಚಣಿ ಹಣದಲ್ಲಿ ಸಾಕಷ್ಟು ಮಂದಿ ಜೀವನ ಸಾಗಿಸುತ್ತಿದ್ದರು. ಪಿಂಚಣಿ ಸ್ಥಗಿತಗೊಂಡಿರುವ ಬಗ್ಗೆ ಅಂಚೆ ಕಚೇರಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಬೇಜವಾಬ್ದಾರಿಯುತವಾಗಿ ಮಾತನಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳು ಪಿಂಚಣಿ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕ್ಯಾಲನೂರು ಸುತ್ತಮುತ್ತಲಿನ ಸುಮಾರುಸ 500 ಮಂದಿಗೆ ಪಿಂಚಣಿ ಬಂದಿಲ್ಲ. ಈ ಬಗ್ಗೆ ಕಂದಾಯ ನಿರೀಕ್ಷಕ ರಮೇಶ್ ಹಾಗೂ ವೇಮಗಲ್ ಉಪ ತಹಶೀಲ್ದಾರ್ ಹೇಮಲತಾ ಅವರನ್ನು ವಿಚಾರಿಸಿದಾಗ, ಖಜಾನೆಯಲ್ಲಿ 500 ಮಂದಿಯ ಆಧಾರ್ ಕಾರ್ಡ್‌ನ ಮಾಹಿತಿ ದಾಖಲಾಗದ ಕಾರಣ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಈ ಸಮಸ್ಯೆ ಬಗೆಹರಿಸಿ ಶೀಘ್ರವೇ ಪಿಂಚಣಿ ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.