ಕೋಲಾರ: ನರಸಾಪುರದಿಂದ ದಿನ್ನೆಹೊಸಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿ, ರೈತ ಸಂಘದ ಕಾರ್ಯಕರ್ತರು ದಿನ್ನೆ ಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿದರು.
ಹಾಲಿನ ವಾಹನಗಳು, ರೈತರು ತಾವು ಬೆಳೆದಂತಹ ತರಕಾರಿ ಸೊಪ್ಪುಗಳನ್ನು ಮಾರುಕಟ್ಟೆಗೆ ಸಾಗಿಸಲು ಈ ರಸ್ತೆಯು ಬಹಳ ಮುಖ್ಯವಾಗಿದೆ. ಆದರೆ ಈ ರಸ್ತೆ ಹದಗೆಟ್ಟಿದ್ದು ಶೋಚನೀಯವಾಗಿದೆ. ರಸ್ತೆ ಸರಿಪಡಿಸುವಂತೆ ದಿನ್ನೆ ಹೊಸಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಮುಖಂಡ ವೀರಭದ್ರ ಸ್ವಾಮಿ, ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ನರಸಾಪುರ ಹೋಬಳಿಗೆ ಸೇರಿದ ದಿನ್ನೆ ಹೊಸಹಳ್ಳಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಹಲವು ಬಾರಿ ದೂರು ನೀಡಿದ್ದರು ಕ್ರಮ ಕೈಗೊಂಡಿಲ್ಲ. ಚೆನ್ನಾಗಿದ್ದ ರಸ್ತೆಯನ್ನು ಕೆ.ಸಿ ವ್ಯಾಲಿ ಕಾಮಗಾರಿ ನಡೆಯುವ ಸಮಯದಲ್ಲಿ ಕಿತ್ತು ಹಾಕಲಾಗಿದೆ. ಹದಗೆಟ್ಟಿರುವ ರಸ್ತೆ ಪರಿಶೀಲಿಸಿ ಕಾಮಗಾರಿಗೆ ಚಾಲನೆ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡ ರಾಮೇಗೌಡ ದೂರಿದರು.
ಉಪ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ ಹಾಗೂ ತಹಶೀಲ್ದಾರ್ ವಿಲಿಯಂ ಅವರು ರಸ್ತೆ ಪರಿಶೀಲಿಸಿದರು.
ಮುಖಂಡರಾದ ಹೊಸಹಳ್ಳಿ ರಮೇಶ್, ಲಕ್ಷ್ಮಣ್, ವೀರೇಂದ್ರ ಪಾಟಿಲ್, ಎಂ.ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.