ADVERTISEMENT

ರಾಜ್‌ಕುಮಾರ್‌ ಅಭಿಮಾನಿಗೆ ಕರವೇ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 17:09 IST
Last Updated 24 ಏಪ್ರಿಲ್ 2021, 17:09 IST
ಕರ್ನಾಟಕ ರಕ್ಷಣಾ ವೇದಿಕೆಯು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ರಾಜ್‌ಕುಮಾರ್‌ರ ಅಭಿಮಾನಿ ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯು ಕೋಲಾರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್ ಜನ್ಮ ದಿನಾಚರಣೆಯಲ್ಲಿ ರಾಜ್‌ಕುಮಾರ್‌ರ ಅಭಿಮಾನಿ ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು.   

ಕೋಲಾರ: ಚಿತ್ರನಟ ರಾಜ್‌ಕುಮಾರ್‌ ಹುಟ್ಟು ಹಬ್ಬವನ್ನು ಕಳೆದ 3 ದಶಕಗಳಿಂದ ಮನೆ ಹಬ್ಬದಂತೆ ಆಚರಿಸುತ್ತಿರುವ ನಗರದ ಕೆಇಬಿ ಕಾಲೊನಿಯ ಪದ್ಮಾವತಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್‌ ಶೆಟ್ಟಿ ಬಣ) ವತಿಯಿಂದ ಇಲ್ಲಿ ಶನಿವಾರ ಸನ್ಮಾನಿಸಲಾಯಿತು.

ಸಂಘಟನೆಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್‌ಕುಮಾರ್‌ ಜನ್ಮ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಾವತಮ್ಮ, ‘ರಾಜ್‌ಕುಮಾರ್‌ ತಮ್ಮ ಜೀವಿತಾವಧಿಯಲ್ಲಿ ಯಾವುದೇ ವಿವಾದಕ್ಕೆ ಅವಕಾಶ ನೀಡಲಿಲ್ಲ. ರಾಜಕೀಯಕ್ಕೆ ಬರುವ ಬಯಕೆ ವ್ಯಕ್ತಪಡಿಸಲಿಲ್ಲ. ತಮ್ಮ ಬದುಕು ಕನ್ನಡ ನಾಡು, ನುಡಿಗೆ ಸೀಮಿತವೆಂದು ನಂಬಿದ್ದರು’ ಎಂದು ಹೇಳಿದರು.

‘ಪದ್ಮಾವತಿ ಅವರು 30 ವರ್ಷಗಳಿಗೂ ಹೆಚ್ಚು ಕಾಲ ಕನ್ನಡ ಸಂಘಟನೆಗಳ ಜತೆಗೂಡಿ ಬೆಂಗಳೂರು ಹಾಗೂ ಕೋಲಾರ ನಗರದಲ್ಲಿ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಅವರನ್ನು ರಾಜ್‌ಕುಮಾರ್‌ ಪ್ರತಿಮೆ ಮುಂದೆ ಸನ್ಮಾನಿಸುತ್ತಿರುವುದು ಸಂತಸ ತಂದಿದೆ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಚಂಬೆ ರಾಜೇಶ್ ತಿಳಿಸಿದರು.

ADVERTISEMENT

‘ಕನ್ನಡ ಚಿತ್ರರಂಗದಲ್ಲಿ ಮೇರು ನಟರಾಗಿದ್ದ ರಾಜ್‌ಕುಮಾರ್ ಪೌರಾಣಿಕ ಹಾಗೂ ಆಧುನಿಕ ಕಥಾ ವಸ್ತುವಿನ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರ ಅಭಿಯನದ ಚಲನಚಿತ್ರಗಳಲ್ಲಿ ಮಾನವೀಯ ಮೌಲ್ಯಗಳಿದ್ದು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅವರ ಚಲನಚಿತ್ರಗಳು ಪೂರಕವಾಗಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ತೆರೆ ಕಾಣುತ್ತಿರುವ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕರವೇ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.