ADVERTISEMENT

ಮಾಲೂರು | ರಂಗಮಂದಿರ: ಸೌಕರ್ಯ ಕೊರತೆ, ಕೇಳದ ಸಾಂಸ್ಕೃತಿಕ ನಿನಾದ

ಪಾಳು ಬೀಳುತ್ತಿದೆ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರಂಗಮಂದಿರ

ವಿ.ರಾಜಗೋಪಾಲ್
Published 10 ಫೆಬ್ರುವರಿ 2025, 6:44 IST
Last Updated 10 ಫೆಬ್ರುವರಿ 2025, 6:44 IST
ಮಾಲೂರಿನ ಮಾಸ್ತಿ ಅಯ್ಯಂಗಾರ್‌ ರಂಗ ಮಂದಿರಕ್ಕೆ ಬೀಗ ಹಾಕಿರುವುದರಿಂದ ರಂಗಮಂದಿರ ಆವರಣದಲ್ಲಿ ವಾಹನಗಳ ನಿಲುಗಡೆ
ಮಾಲೂರಿನ ಮಾಸ್ತಿ ಅಯ್ಯಂಗಾರ್‌ ರಂಗ ಮಂದಿರಕ್ಕೆ ಬೀಗ ಹಾಕಿರುವುದರಿಂದ ರಂಗಮಂದಿರ ಆವರಣದಲ್ಲಿ ವಾಹನಗಳ ನಿಲುಗಡೆ   

ಮಾಲೂರು: ಇಲ್ಲಿನ ಪುರಸಭೆ ಬಳಿ ಇರುವ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಲರವ ಕೇಳಿಸದೆ ಹಲವು ವರ್ಷಗಳೆ ಕಳೆದಿವೆ. ನಾಟಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಕಾರ್ಯಕ್ರಮ ನಡೆಸಲು ಬೇಕಾದ ಕನಿಷ್ಠ ಮೂಲ ಸೌಕರ್ಯ ಇಲ್ಲದೆ ರಂಗಮಂದಿರ ಪಾಳು ಬೀಳುತ್ತಿದೆ.

1998ರಲ್ಲಿ ಭುವನೇಶ್ವರಿ ಕಲಾ ಸಂಘದಿಂದ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರಂಗಮಂದಿರಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಆರಂಭದಿಂದಲೂ ರಂಗಮಂದಿರ ನಿರ್ಮಾಣಕ್ಕೆ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಾಲೇ ಬಂದವು. ಕೊನೆಗೂ 2014ರಲ್ಲಿ ಪುರಸಭೆಯಿಂದ ₹1.10 ಕೋಟಿ ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಯಿತು. ಆದರೆ ಕಾರ್ಯಕ್ರಮ ನಡೆಸಲು ಬೇಕಾದ ಸೌಕರ್ಯಗಳನ್ನು ಕಲ್ಪಿಸಲಿಲ್ಲ. ನಡೆಸಿದ ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಲಿಲ್ಲ. ಹೀಗಾಗಿ ವ್ಯವಸ್ಥಿತಿವಾಗಿ ಕಾರ್ಯಕ್ರಮ ಆಯೋಜಿಸಲು ಸಂಘ–ಸಂಸ್ಥೆಗಳು ಪರದಾಡುವಂತಾಯಿತು.

ಉತ್ತಮ ಸೌಂಡ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಮೈಕ್‌ನಲ್ಲಿ ಮಾತನಾಡಿದರೆ ಎಕೋ ಬರುತ್ತಿತು. ವೇದಿಕೆಯಲ್ಲಿ ಗಣ್ಯರು ಮತ್ತು ನಿರೂ‍ಪಕರು ಮಾತನಾಡುವುದು ಪ್ರೇಕ್ಷಕರಿಗೆ ಕೇಳಲ್ಲ. ಸರಿಯಾದ ಲೈಟಿಂಗ್‌ ವ್ಯವಸ್ಥೆಯೂ ಇಲ್ಲ. ಹಾಸನ ವ್ಯವಸ್ಥೆಯಂತು ಕೇಳುವುದೇ ಬೇಡ. ಪ್ರೇಕ್ಷಕರು ಕುಳಿತುಕೊಂಡರೆ ಆಸನಗಳು ಮುರಿದು ಬೀಳುತ್ತವೆ.

ADVERTISEMENT

ಮಳೆ ಬಂದರೆ ವೇದಿಕೆ ಮುಂಭಾಗದಲ್ಲಿ ನೀರು ಶೇಖರಣೆಯಾಗುತ್ತದೆ. ಶೌಚಾಲಯ ನಿರ್ವಹಣೆಯ ಅವ್ಯವಸ್ಥೆಯಿಂದ ಜನ ಮೂಗು ಮುಚ್ಚಿಕೊಂಡು ಶೌಚಕ್ಕೆ ಹೋಗಬೇಕು. ವಿದ್ಯುತ್‌ ಪೂರೈಕೆಯೂ ಅಸಮರ್ಪಕ.

ಇಂತಹ ಹಲವು ಕಾರಣಗಳಿಂದ ಶುಲ್ಕ ಪಾವತಿಸಿ ಕನ್ನಡ ರಾಜ್ಯೋತ್ಸವ, ನಾಟಕ, ಸಂಗೀತ, ಸಾಹಿತ್ಯ ಸಮ್ಮೇಳನ ಸೇರಿದಂತೆ ಮುಂತಾದ ಕಾರ್ಯಕ್ರಮಗಳು ಸರಿಯಾಗಿ ನಡೆಸಲು ಆಗುತ್ತಿಲಿಲ್ಲ. ಇದು ಆಯೋಜಕರಿಗೆ ಕಸಿ–ವಿಸಿ ಆಗುತ್ತಿತು.  ಇದರಿಂದ ಸಾರ್ವಜನಿಕರು ಮತ್ತು ಸಂಘ–ಸಂಸ್ಥೆಗಳು ಇಲ್ಲಿ ಕಾರ್ಯಕ್ರಮ ಏರ್ಪಡಿಸುವುದೇ ಬಿಟ್ಟು ಖಾಲಿ ಮೈದಾನ–ರಸ್ತೆಗಳಲ್ಲೇ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ನಿರ್ಮಿಸದ ರಂಗಮಂದಿರ ಜನ ಉಪಯೋಗಕ್ಕೆ ಬಾರದಂತಾಗಿದೆ.

ಮಾಸ್ತಿ ಕನ್ನಡದ ಆಸ್ತಿ. ಮಾಸ್ತಿಯವರು ನಮ್ಮ ತಾಲೂಕಿನ ಹೆಮ್ಮೆಯ ಸಾಹಿತಿ. ಇವರ ಹೆಸರಿನಲ್ಲಿ ನಿರ್ಮಿಸಿರುವ ರಂಗಂಮದಿರವನ್ನು ಅಭಿವೃದ್ಧಿಪಡಿಸಿ ಜಿಲ್ಲೆ ಮತ್ತು ರಾಜ್ಯಕ್ಕೆ ಮಾದರಿ ಆಗುವಂತೆ ಮಾಡಬೇಕೆಂಬುದು ತಾಲ್ಲೂಕಿನ ಜನರ ಆಗ್ರಹ.

ವಾಹನ ನಿಲುಗಡೆ ಸ್ಥಳವಾಗದ ಆವರಣ: ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ರಂಗಂಮದಿರದ ಮುಂದಿನ ಜಾಗ ಸಾರ್ವಜನಿಕರ ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಟ್ಟಿದೆ.

ರಂಗಮಂದಿರದ ಒಳಾಂಗಣದ ಸ್ಥಿತಿ
ಪ್ರಯೋಜನೆಕ್ಕೆ ಬಾರದ 1.10 ಕೋಟಿ ವೆಚ್ಚದ ರಂಗಂಮದಿರ ಖಾಲಿ ಮೈದಾನ, ರಸ್ತೆಯಲ್ಲಿ ಕಾರ್ಯಕ್ರಮ ಆಯೋಜನೆ ವಾಹನ ನಿಲುಗಡೆ ಸ್ಥಳವಾದ ರಂಗಮಂದಿರ ಆವರಣ
ಸರ್ಕಾರದಿಂದ ₹1.42 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲವು ತಾಂತ್ರಿಕ ದೋಷದಿಂದ ರಂಗಮಂದಿರ ಅಭಿವೃದ್ಧಿ ತಡವಾಗಿದೆ. ರಂಗಮಂದಿರ ಅಭಿವೃದ್ಧಿಗೆ ಟೆಂಡರ್‌ ಹರಾಜು ಪ್ರತಿಕ್ರಿಯೆ ನಡೆಯುತ್ತಿದೆ.
ಪ್ರದೀಪ್ ಕುಮಾರ್‌ ಮುಖ್ಯಧಿಕಾರಿ ಪುರಸಭೆ
ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯೋತ್ಸವ ಆಚರಿಸಲು ಸೂಕ್ತ ವೇದಿಕೆ ಇಲ್ಲ. ಅದಷ್ಟು ಬೇಗ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ರಂಗಮಂದಿರನ್ನು ದುರಸ್ತಿಗೊಳಿಸಿ ಅಗತ್ಯ ಸೌಲಭ್ಯ ಕಲ್ಪಿಸಿ
ಶ್ರೀನಿವಾಸ್ ತಾಲ್ಲೂಕು ಅಧ್ಯಕ್ಷ ಕರವೇ
ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ
ನಾವು ಬಾಲಕರಾಗಿದ್ದಾಗಲೇ ಪಟ್ಟಣದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ತುಡಿಯುತ್ತಿದ್ದಾರೆ. ಆಗ ಹಿರಿಯರು ಅದಕ್ಕಾಗಿ ಜಾಗ ಕೊಟ್ಟಿದ್ದರು. ನಂತರದ ದಿನಗಳಲ್ಲಿ ನಾಟಕ ಪ್ರದರ್ಶಿಸಲು ಅಂದಿನ ಪುರಸಭೆ ಅಧ್ಯಕ್ಷ ವೆಂಕಟಸ್ವಾಮಿ ಪುರಸಭೆಯ ಪಕ್ಕದ ಆವರಣದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರು. ಆಗ ನಾಗರಿಕರ ಸಹಕಾರದಿಂದ ರಂಗಮಂದಿರ ನಿರ್ಮಾಣ ಮಾಡಿದ್ದೇವು. ಅದರಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತು ಎಂದು ಸ್ಮರಿಸುತ್ತಾರೆ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಎಂವಿ.ಹನುಮಂತಪ್ಪ. ಇದೇ ಸ್ಥಳದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕೆ.ಎಸ್. ಮಂಜುನಾಥಗೌಡ ಶಾಕರಾಗಿದ್ದ ಸಂದರ್ಭ ಮುಂದಾದರು. ಆದರೆ ಕಾಮಗಾರಿ ಆರಂಭಗೊಂಡ ನಂತರ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು. ಇದರಿಂದ ಕಾಮಗಾರಿ ನೆನೆಗುದಿಗೆ ಬಿತ್ತು. ಅಂದಿನ ಪುರಭಾಧ್ಯಕ್ಷ ಸಿ.ಪಿ.ನಾಗರಾಜ್ ಅವರು ಸೌಕರ್ಯಗಳು ಇಲ್ಲದಿದ್ದರೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಂಗಮಂದಿರವನ್ನು ದಿಢೀರ್‌ ಆಗಿ ಉದ್ಘಾಟಿಸಿದರು. ಇಲ್ಲಿಂದಲೇ ಶುರುವಾಯಿತು ಸಮಸ್ಯೆ ಎನ್ನುತ್ತಾರೆ ಹನುಮಂತಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.