ADVERTISEMENT

ಯುವ ಕ್ರೀಡಾಪಟುಗಳ ಪ್ರತಿಭೆ ಗುರುತಿಸಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 13:46 IST
Last Updated 4 ಜುಲೈ 2021, 13:46 IST
ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ ಜಿಲ್ಲೆಯ ಕ್ರೀಡಾಪಟುಗಳ ಜತೆ ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಭಾನುವಾರ ಸಮಾಲೋಚನೆ ನಡೆಸಿದರು
ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ ಜಿಲ್ಲೆಯ ಕ್ರೀಡಾಪಟುಗಳ ಜತೆ ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಭಾನುವಾರ ಸಮಾಲೋಚನೆ ನಡೆಸಿದರು   

ಕೋಲಾರ: ‘ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದ ಜಿಲ್ಲೆಯ ಕ್ರೀಡಾಪಟುಗಳ ಜತೆ ಇಲ್ಲಿ ಭಾನುವಾರ ನಡೆದ
ಸಮಾಲೋಚನೆಯಲ್ಲಿ ಮಾತನಾಡಿ, ‘ಕ್ರೀಡೆಯಲ್ಲಿ ಆಸಕ್ತಿ ತೋರಿ ಸಾಧನೆ ಮಾಡುವವರಿಗೆ ಪ್ರತ್ಯೇಕ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಬೇಕು. ಅಲ್ಲಿ ಅನುಭವಿ ತರಬೇತುಗಾರರನ್ನು ನೇಮಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಕ್ರೀಡಾಪಟುಗಳಿಗೆ ಅಗತ್ಯವಿರುವ ಸಿಂಥೆಟಿಕ್ ಟ್ರ್ಯಾಕ್‌ ನಿರ್ಮಿಸುವ ಸಂಬಂಧ ಈಗಾಗಲೇ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರೊಂದಿಗೆ ಚರ್ಚಿಸಲಾಗಿದೆ. ಸಚಿವರು ಕ್ರೀಡಾಂಗಣ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಿ ಅವರ ಪರಿಶ್ರಮಕ್ಕೆ ತಕ್ಕ ತರಬೇತಿ ನೀಡಬೇಕು. ಶಾಲಾ ಮಟ್ಟದಿಂದ ಕಾಲೇಜಿನವರೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು. ಜತೆಗೆ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಮೈದಾನ ಇರಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕ್ರೀಡಾಭ್ಯಾಸಕ್ಕೆ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ವೈಟಲ್ ಪ್ರೊ ಸ್ಪೋರ್ಟ್ಸ್ ಸೊಸೈಟಿ ಸಿಇಒ ಆರ್‌.ಪ್ರದೀಪ್ ನಾಯ್ಡು, ಉಪಾಧ್ಯಕ್ಷ ಪಾರ್ಥಿಭಾನ್, ಪ್ಯಾರಾ ಒಲಿಂಪಿಕ್ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಅಂತರಾರಾಷ್ಟ್ರೀಯ ಕ್ರೀಡಾಪಟುಗಳಾದ ಧನಂಜಯ, ಪ್ರವೀಣ್, ಯಲ್ಲಪ್ಪ, ನಾಗೇಶ್, ಜಿಲ್ಲಾ ನೆಹರೂ ಯುವ ಕೇಂದ್ರ ಅಧಿಕಾರಿ ಸರಣ್ಯ, ಬಿಇಒ ರಾಮಕೃಷ್ಣಪ್ಪ, ಜಗನ್‌ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಗನ್ನಾಥ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.