ADVERTISEMENT

ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:30 IST
Last Updated 24 ಜನವರಿ 2020, 16:30 IST
ಕೋಲಾರದ ಕಠಾರಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ ಆಚರಿಸಲಾಯಿತು.
ಕೋಲಾರದ ಕಠಾರಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮದಿನ ಆಚರಿಸಲಾಯಿತು.   

ಕೋಲಾರ: ‘ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ಸ್ಮರಿಸಿ ಗೌರವ ಸಲ್ಲಿಸಬೇಕು’ ಎಂದು ನಗರದ ಕಠಾರಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಂಜುಳಾ ಹೇಳಿದರು.

ಶಾಲೆಯಲ್ಲಿ ಗುರುವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ಸುಭಾಷ್‌ಚಂದ್ರ ಬೋಸ್‌ ದೇಶ ಕಂಡ ಅಪ್ರತಿಮ ದೇಶಭಕ್ತ ಹಾಗೂ ವೀರ ಸೇನಾನಿ’ ಎಂದು ಬಣ್ಣಿಸಿದರು.

‘ಬೋಸ್‌ ಅವರು ಇಂಗ್ಲೆಂಡ್‌ನಲ್ಲಿ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾರ್ಯ ನಿರ್ವಹಿಸುವಾಗ ಬ್ರಿಟೀಷರ ಅಡಿಯಾಳಾಗಿ ಕೆಲಸ ಮಾಡಲು ನಿರಾಕರಿಸಿದರು. ನಂತರ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು. ಚಿತ್ತರಂಜನ್‌ ಜತೆಗೂಡಿ ಸ್ವರಾಜ್ಯ ಪಕ್ಷ ಸ್ಥಾಪಿಸಿ ಯುವಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದು ತಿಳಿಸಿದರು.

ADVERTISEMENT

‘ದೇಶಪ್ರೇಮಿಗಳ ತತ್ವಾದರ್ಶವು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸುಭಾಷ್ ಚಂದ್ರಬೋಸ್ ಯುವ ಪೀಳಿಗೆಗೆ ಸ್ಫೂರ್ತಿ. ಅವರು ದೇಶ ವಿದೇಶ ಸುತ್ತಿ ಯುವ ಜನಾಂಗ ಸಂಘಟಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು. ಅವರ ದೇಶಪ್ರೇಮ ಯುವ ಪೀಳಿಗೆಗೆ ಮಾದರಿಯಾಗಬೇಕು’ ಎಂದರು.

‘ಸುಭಾಷ್‌ ಚಂದ್ರಬೋಸ್‌ರ ಶಿಸ್ತು, ಸಮಯ ಪಾಲನೆ ಗುಣವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು. ದೇಶ ಭಕ್ತರ ಸಾಧನೆ ಕುರಿತ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗರಾಜು ಸಲಹೆ ನೀಡಿದರು.

ಶಾಲೆಯ ಶಿಕ್ಷಕರಾದ ನಯಾಜ್ ಪಾಷಾ, ರತ್ನಮ್ಮ, ನಾಗರತ್ನಮ್ಮ, ಶೋಭಾ, ಸೂರ್ಯ ನಾರಾಯಣರಾವ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.