ADVERTISEMENT

ದಲಿತ ಸಂಘಟನೆಗಳಿಗೆ ಮರುಜೀವ; ಫೆ. 20ರಂದು ಕಾರ್ಯಾಗಾರ, ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 4:33 IST
Last Updated 17 ಫೆಬ್ರುವರಿ 2021, 4:33 IST
ಮುಳಬಾಗಿಲು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಕಾರ್ಯಕ್ರಮದ ಸಲುವಾಗಿ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು
ಮುಳಬಾಗಿಲು ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಕಾರ್ಯಕ್ರಮದ ಸಲುವಾಗಿ ಪದಾಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು   

ಮುಳಬಾಗಿಲು: ದಲಿತ ಸಂಘರ್ಷ ಸಮಿತಿ ಅಡಿಯಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡಿರುವ ಎಲ್ಲ ದಲಿತ ಸಂಘಟನೆಗಳಿಗೆ ಮರುಜೀವ ತುಂಬಿಸಲು ಫೆ. 20ರಂದು ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ದಸಂಸ (ಸಂಯೋಜಕ) ವಿ.ನಾಗರಾಜ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಕಾರ್ಯಕ್ರಮದ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನದ ಆಶಯ ಈಡೇರಿಕೆಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಿ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಆದರೆ ಈಚಿನ ದಿನಗಳಲ್ಲಿ ದಲಿತ ಸಂಘಟನೆಗಳು ವಿಭಾಗವಾಗಿದೆ. ಹೀಗೆ ಮುಂದುವರಿದರೆ ದಲಿತರು ತಮ್ಮ ಹಕ್ಕುಗಳಿಗೆ ಹೋರಾಟ ಮಾಡಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತದೆ. ಎರಡು ದಿನಗಳ ಕಾರ್ಯಾಗಾರದಲ್ಲಿ ದಲಿತ ಸಂಘಟನೆಗಳನ್ನು ಒಗ್ಗೂಡಿಸಲು ಎಲ್ಲರ ಅಭಿಪ್ರಾಯ ಪಡೆಯಲಾಗುವುದು ಎಂದರು.

ADVERTISEMENT

ಸರ್ಕಾರದಿಂದ ಬರುವ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ. ಬಜೆಟ್ ಅನ್ನು ತಯಾರು ಮಾಡುವ ಪೂರ್ವಭಾವಿಯಾಗಿ ದೇಶದ ಎಲ್ಲ ರಾಜ್ಯಗಳ ಎಲ್ಲಾ ಸಮಾಜಗಳಿಗೆ ಮೀಸಲಾತಿ ಪ್ರಕಾರ ಅನುದಾನ ಹಂಚಿಕೆ ಮಾಡುವ ವಿಚಾರವಾಗಿ ಹಿಂದಿನ ಸರ್ಕಾರಗಳು, ಸಂಘಟನೆಗಳ ನಾಯಕರ ಅಭಿಪ್ರಾಯ ತೆಗೆದುಕೊಳ್ಳುತ್ತಿದ್ದರು. ಅದರೆ ಬಿಜೆಪಿ ಸರ್ಕಾರ ದಲಿತ ಸಂಘಟನೆಗಳನ್ನು ಕಡೆಗಣಿಸಿದೆ ಎಂದರು.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಕೇಂದ್ರ ಸರ್ಕಾರ ಬೆಲೆ ಕೊಡುತ್ತಿಲ್ಲ. ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಿಂದ ಬಡವರಿಗೆ, ಹಿಂದುಳಿದ ವರ್ಗದವರಿಗೆ ತೊಂದರೆಯಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಪ್ರಜೆಗಳ ಮತದಿಂದ ಅಧಿಕಾರ ಪಡೆದು ಅವರ ಸಮಸ್ಯೆಗಳನ್ನು ಆಲಿಸದೆ ನಿರ್ಲಕ್ಷ್ಯ ತೋರುತ್ತಿದೆ ಎಂದು
ಆರೋಪಿಸಿದರು.

ರಾಜ್ಯ ಮುಖಂಡ ರಾಜಶೇಖರ್, ಲೋಕೇಶ್, ಜಿಲ್ಲಾ ಮುಖಂಡ ಚಂದ್ರಮೌಳಿ, ತಾ.ಪಂ ಮಾಜಿ ಸದಸ್ಯ ವೈ.ಎಂ.ರೆಡ್ಡಿ, ದಲಿತ ಮುಖಂಡ ಮೆಕಾನಿಕ್ ಶ್ರೀನಿವಾಸ್ ಮಾತನಾಡಿದರು.

ಮುಖಾಂಡ ಅವಣಿಕಾಶಿ, ಡೆವಿಡ್, ವಾಜಿದ್, ಬಂಗವಾದಿ ಶ್ರೀನಿವಾಸ್, ರಾಮಚಂದ್ರಪ್ಪ, ವರಲಕ್ಷ್ಮಿ, ಮಂಜುಳಾ, ನಾರಾಯಣಸ್ವಾಮಿ, ಮಟ್ಟಕನ್ನಸಂದ್ರ ನಾರಾಯಣಸ್ವಾಮಿ, ಆವಲಕುಪ್ಪ ಆರ್.ಬಾಬು, ಮಾಸ್ತೇನಹಳ್ಳಿ ವೆಂಕಟರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.