ADVERTISEMENT

ಎಸ್‌ಸಿ ಕ್ರಿಶ್ಚಿಯನ್‌ ಪದಗಳನ್ನೂ ತೆಗೆಯಿರಿ: ಮಾಜಿ ಶಾಸಕ ಸಂಪಂಗಿ ಎಚ್ಚರಿಕೆ

13 ಜಾತಿಗಳಲ್ಲಿನ ಪದ ತೆಗೆಯದಿದ್ದರೆ ರಾಜ್ಯದಾದ್ಯಂತ ಹೋರಾಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 3:09 IST
Last Updated 23 ಸೆಪ್ಟೆಂಬರ್ 2025, 3:09 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು. ಪ್ರವೀಣಗೌಡ, ಕಪಾಲಿ ಶಂಕರ್‌, ಬಾಲಾಜಿ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿದರು. ಪ್ರವೀಣಗೌಡ, ಕಪಾಲಿ ಶಂಕರ್‌, ಬಾಲಾಜಿ ಪಾಲ್ಗೊಂಡಿದ್ದರು    

ಕೋಲಾರ: ‘ವಿವಿಧ ಜಾತಿಗಳ ಜೊತೆಗಿದ್ದ ಕ್ರಿಶ್ಚಿಯನ್‌ ಪದವನ್ನು ಮಾತ್ರ ತೆಗೆದು ಪರಿಶಿಷ್ಟ ಜಾತಿಗಳ (ಎಸ್‌ಸಿ) ಜೊತೆಗಿರುವ ಪದವನ್ನು ಹಾಗೆಯೇ ಉಳಿಸಿರುವುದು ಸರಿಯಲ್ಲ. ಶೋಷಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಜೊತೆಗಿರುವ ಕ್ರಿಶ್ಚಿಯನ್‌ ಪದವನ್ನೂ ತೆಗೆಯಬೇಕು’ ಎಂದು ಮಾಜಿ ಶಾಸಕ ವೈ.ಸಂಪಂಗಿ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು 48 ಜಾತಿಗಳ ಜತೆಗೆ ಸೇರಿಸಿದ್ದ ಕ್ರಿಶ್ಚಿಯನ್ ಪದವನ್ನು ಈಗಾಗಲೇ 33 ಜಾತಿಗಳಲ್ಲಿ ತೆಗೆದಿದ್ದು, ಬಾಕಿ ಇರುವ 13 ಜಾತಿಗಳಲ್ಲಿಯೂ ಪದವನ್ನು ತೆಗೆಯಲು ಕೂಡಲೇ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸುಮಾರು ₹ 150 ಕೋಟಿ ಖರ್ಚು ಮಾಡಿ ನಡೆಸಿದ್ದ ಪರಿಶಿಷ್ಟ ಜಾತಿ ಸಮೀಕ್ಷೆಯ ವರದಿಯಲ್ಲಿ ಜಾತಿಗಳ ಮುಂದೆ ಕ್ರಿಶ್ಚಿಯನ್ ಎನ್ನುವ ಪದವೇ ಇರಲಿಲ್ಲ. ಆದರೆ, ಈಗ ಆದಿ ಕರ್ನಾಟಕ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಮಾದಿಗ ಕ್ರಿಶ್ಚಿಯನ್, ಛಲವಾದಿ ಕ್ರಿಶ್ಚಿಯನ್ ಎಂದು ಪರಿಶಿಷ್ಟ ಜಾತಿಗಳನ್ನು ಗುರುತಿಸುವುದು ಸರಿಯಲ್ಲ ಎಂದರು.

ADVERTISEMENT

‘ಒಳಮೀಸಲಾತಿ ಜಾರಿಯಾಗಿದ್ದರೂ ಇಲ್ಲಿಯವರೆಗೂ ಗೊಂದಲಗಳು ಬಗೆಹರಿದಿಲ್ಲ. ಆದಿ ಕರ್ನಾಟಕ, ಆದಿ ದ್ರಾವಿಡ ಎಂದು ಬರೆಸಿದವರ ಗುಂಪಿನ ಮೂಲ ಜಾತಿ ಪತ್ತೆ ಹಚ್ಚಿ ಅವರಿಗೆ ಪ್ರವರ್ಗ ನಿಗದಿಪಡಿಸಬೇಕು. ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಎಸ್‌ಸಿ ಸಮುದಾಯಗಳ ಜನರು ತಮ್ಮ ಮೂಲ ಜಾತಿ ಹೆಸರು ಬರೆಸಬೇಕು. ಧರ್ಮದ ಕಲಂನಲ್ಲಿ ‌ಹಿಂದೂ ಎಂದು ಬರೆಸಿ ಎಂಬುದಾಗಿ ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ ಈಗಾಗಲೇ ಹೇಳಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಸಮೀಕ್ಷೆಯಲ್ಲಿ ಅಸಂವಿಧಾನಿಕವಾಗಿ 13 ಜಾತಿಗಳ ಸೇರ್ಪಡೆ ಖಂಡಿಸಿ ಹಿಂದುತ್ವ ಸಂಘಟನೆಗಳಿಂದ ಸೆ.23ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಹೇಳಿದರು.

‘ಹಿಂದೂ ‌ಸಮಾಜ ಒಡೆಯಲು ಕಾಂಗ್ರೆಸ್‌ನವರು ಹುನ್ನಾರ ನಡೆಸಿದ್ದಾರೆ. ಪಕ್ಷದ ಹೈಕಮಾಂಡ್‌ ರಾಹುಲ್ ಗಾಂಧಿ ಹಾಗೂ ಸೋನಿಯಾ‌ ಗಾಂಧಿ ಅವರನ್ನು ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್‌ ಪ್ರವೀಣಗೌಡ, ಮುಖಂಡರಾದ ಅಪ್ಪಿ ನಾರಾಯಣಸ್ವಾಮಿ, ಕಪಾಲಿ ಶಂಕರ್, ತಿಮ್ಮರಾಯಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಬಾಲಾಜಿ ಇದ್ದರು.

ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ಒಡೆದು ಆಳುವುದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಹುನ್ನಾರವಾಗಿದೆ. ಹಿಂದೂಗಳು ಒಗ್ಗಟ್ಟಾಗುವುದು ಬೇಡವೇ? ಛಿದ್ರ ಛಿದ್ರವಾಗಿಯೇ ಇರಬೇಕೇ?
-ವೈ.ಸಂಪಂಗಿ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.