
ವರ್ತೂರು ಪ್ರಕಾಶ್
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಹೈಕಮಾಂಡ್ ಏನಾದರೂ ಕೈ ಹಾಕಿದರೆ ಕಾಂಗ್ರೆಸ್ ಸ್ಮಶಾನ ಸೇರುತ್ತದೆ. ಆ ಪಕ್ಷದ ಕಥೆ ಮುಗಿಯುತ್ತದೆ ಎಂದು ಮಾಜಿ ಸಚಿವ ಬಿಜೆಪಿಯ ವರ್ತೂರು ಪ್ರಕಾಶ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 25 ಲಕ್ಷ ಕುರುಬರು ಕಾಂಗ್ರೆಸ್ ಸರ್ಕಾರಕ್ಕೆ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
‘ನಮಗೆ ಪಕ್ಷ ಮುಖ್ಯವಲ್ಲ; ಜಾತಿ ಮುಖ್ಯ. ಕೆಲ ದಿನಗಳಿಂದ ರಾಜ್ಯ ಸರ್ಕಾರದ ರಾಜಕೀಯ ಬೆಳವಣಿಗೆಗಳ ಬಗ್ಗೆ ನಾನಾ ಚರ್ಚೆಗಳಾಗುತ್ತಿವೆ. ಕಾಂಗ್ರೆಸ್ನ ಒಂದು ಗುಂಪು, ಬಿಜೆಪಿಯ ಒಂದು ಗುಂಪು ಈ ವಿಚಾರದ ಬಗ್ಗೆ ಮಾತನಾಡುತ್ತಿವೆ. ಏನಾದರೂ ಸಿದ್ದರಾಮಯ್ಯ ತಂಟೆಗೆ ಬಂದರೆ ಅವರ ಪರ ಅಹಿಂದ ವರ್ಗ ಒಗ್ಗಟ್ಟಾಗಿ ನಿಲ್ಲಲಿದೆ’ ಎಂದರು.
‘ಸಿದ್ದರಾಮಯ್ಯ ಇಡೀ ಕುರುಬ ಸಮಾಜದ ಪ್ರಮುಖ ನಾಯಕ, ಅಹಿಂದ ವರ್ಗದ ಮುಖಂಡ. ಸಮಾಜ ಬೆಳೆಯಲು ಒಗ್ಗಟ್ಟು ಅಗತ್ಯ. ಒಗ್ಗಟ್ಟು ಇರುವ ಕಾರಣ ನಮ್ಮನ್ನು ಮುಟ್ಟಲು ಭಯಪಡುತ್ತಾರೆ. ಇಲ್ಲದಿದ್ದರೆ ಸಮಾಜ ಮುಗಿಸುತ್ತಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.