ADVERTISEMENT

26ಕ್ಕೆ ಮೂಲನಿವಾಸಿ ಐಕ್ಯತಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 16:48 IST
Last Updated 21 ಜನವರಿ 2021, 16:48 IST

ಕೋಲಾರ: ‘ನಮ್ಮ ದೇಶ ನಮ್ಮ ಸಂವಿಧಾನ ಘೋಷಣೆಯೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜ.26ರಂದು ಮೂಲನಿವಾಸಿ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಿಪಬ್ಲಿಕನ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಶಂಕರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘26ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಸಮಾವೇಶ ನಡೆಯಲಿದ್ದು, ರಾಜ್ಯದ ವಿವಿಧೆಡೆಯ 40 ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸುತ್ತಾರೆ’ ಎಂದರು.

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ ಮೂಲ ಆಶಯ ನಾಶ ಮಾಡಲು ಹೊರಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಕಾಯ್ದೆ ಜಾರಿಗೆ ತರುತ್ತಿವೆ. ಬಂಡವಾಳಶಾಹಿಗಳ ಪರವಾದ ಯೋಜನೆಗಳನ್ನು ಜಾರಿಗೊಳಿಸಿ ಬಡ ಜನರಿಗೆ ಅನ್ಯಾಯ ಮಾಡುತ್ತಿವೆ’ ಎಂದು ಭೀಮಪುತ್ರಿ ಬ್ರಿಗೇಡ್ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ರೇವತಿರಾಜ್ ದೂರಿದರು.

ADVERTISEMENT

‘ದಲಿತರು, ರೈತರು, ಧಾರ್ಮಿಕ ಅಲ್ಪಸಂಖ್ಯಾತರು, ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿಗಳು, ಆದಿವಾಸಿಗಳು, ಅಲೆಮಾರಿಗಳು ಹಾಗೂ ಮೂಲ ನಿವಾಸಿಗಳ ಪರವಾಗಿ ಒಗ್ಗಟ್ಟಿನ ಹಕ್ಕೊತ್ತಾಯಗಳನ್ನು ಜಾರಿಗೆ ತರುವಂತೆ ಐತಿಹಾಸಿಕ ಸಮಾವೇಶದಲ್ಲಿ ಒತ್ತಾಯಿಸಲಾಗುವುದು’ ಎಂದು ವಿವರಿಸಿದರು.

ನೈತಿಕ ಬೆಂಬಲ: ‘ರೈತರ ಹೋರಾಟಕ್ಕೆ ಸಮಾವೇಶದ ಮೂಲಕ ನೈತಿಕ ಬೆಂಬಲ ಸೂಚಿಸುತ್ತೇವೆ. ಸಮಾವೇಶದಲ್ಲಿ ಮಠಾಧೀಶರು, ಬುದ್ಧಿಜೀವಿಗಳು, ವಿಚಾರವಾದಿಗಳು, ಕಾರ್ಮಿಕಪರ, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೋರಾಟ ನಡೆಸುತ್ತಿರುವ ಸಂಘ, ಸಂಸ್ಥೆಗಳ ಮುಖಂಡರು ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಮೂಲನಿವಾಸಿ ಮಹಾ ಒಕ್ಕೂಟದ ಸದಸ್ಯರಾದ ಮುನಿಆಂಜನಪ್ಪ, ವೆಂಕಟೇಶ್, ಆರ್.ಕೇಶವಮೂರ್ತಿ, ವಿಜಯ್‌ಜಾದವ್‌, ವಿಜಯ್‌ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.