
ಕೋಲಾರ: ಮೇಲ್ ಮರುವತ್ತೂರು ಶ್ರೀಆದಿಪರಾಶಕ್ತಿ ಆಧ್ಯಾತ್ಮಿಕ ಅಂದೋಲನ ಜಿಲ್ಲಾ ಸಮಿತಿಯಿಂದ ಆಧ್ಯಾತ್ಮಿಕ ಜ್ಯೋತಿ ಬೆಳಗಿಸುವ ಕಾರ್ಯಕ್ರಮವನ್ನು ಫೆ.8 ರಂದು ಹಮ್ಮಿಕೊಂಡಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಮಿತಿಯ ಜಿಲ್ಲಾಧ್ಯಕ್ಷ ಶಕ್ತಿ ಎ.ಕೃಷ್ಣಪ್ಪ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಗಾರಪೇಟೆ ಮುಖ್ಯ ರಸ್ತೆಯ ಅಂಬೇಡ್ಕರ್ ನಗರದಲ್ಲಿರುವ ಶ್ರೀದೇವಿ ರೇಣುಕಾಯಲ್ಲಮ್ಮ ದೇವಾಲಯ ಆವರಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಮೇಲ್ಮರುವತ್ತೂರು ಆದಿಪರಾಶಕ್ತಿ ಆಧ್ಯಾತ್ಮಿಕ ಆಂದೋಲನದ ಉಪಾಧ್ಯಕ್ಷ ಮರುವೂರು ಚಿನ್ನಾವರ್ ವಹಿಸಲಿದ್ದಾರೆ’ ಎಂದರು.
ಶಾಸಕ ಕೊತ್ತೂರು ಮಂಜುನಾಥ್, ಸಂಸದ ಎಂ.ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಎಂ.ಆರ್.ರವಿ, ಮುಖಂಡ ಸಿಎಂಆರ್ ಶ್ರೀನಾಥ್, ಡಿಐಜಿಪಿ ಡಿ.ದೇವರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆಗಳು ನಡೆಯಲಿವೆ. ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ, ದೇವಾಲಯಕ್ಕೆ ದೀಪಾಲಂಕಾರ ಮಾಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಕೆಲ ತಿಂಗಳ ಹಿಂದೆ ನಗರದಲ್ಲಿ ಪ್ರಥಮ ಬಾರಿ ಗಂಜಿಮಡಿಕೆ ಮೆರವಣಿಗೆ ಉತ್ಸವವನ್ನು ಹಮ್ಮಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಭಾಗಿಯಾಗಿದ್ದರು. ಇದನ್ನು ಮೆಚ್ಚಿ ಮರುವೂರು ಚಿನ್ನಾವರ್ ಹಾಗೂ ದೊಡ್ಡಮ್ಮ, ಚಿಕ್ಕಮ್ಮನವರು ಪ್ರಪ್ರಥಮ ಬಾರಿ ಕೋಲಾರಕ್ಕೆ ಬರುತ್ತಿದ್ದಾರೆ ಎಂದರು.
ತಮಿಳುನಾಡಿನಲ್ಲಿ ನೆಲೆಸಿರುವ ಆದಿಪರಾಶಕ್ತಿ ದೇವಿಗೆ, ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಭಕ್ತರಿದ್ದಾರೆ. ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆದಿಪರಾಶಕ್ತಿ ದೇವಿ ದರ್ಶನಕ್ಕೆ, ವರ್ಷಕ್ಕೆ ಒಂದು ಬಾರಿಯಾದರೂ ತೆರಳುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ ಎಂದು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಸುರೇಶ್, ಯಲ್ಲಮ್ಮ, ನಾರಾಯಣಸ್ವಾಮಿ, ಸಂತೋಷ್, ವೇಣು, ನರಸಾಪುರ ಕೃಷ್ಣಪ್ಪ, ಅಖಿಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.