ಕೋಲಾರ: ಮಂಜೂರಾದ ಭೂಮಿಗೆ ಸಾಗುವಳಿ ಚೀಟಿ ನೀಡಿಲ್ಲವೆಂದು ಆರೋಪಿಸಿ ತಹಶೀಲ್ದಾರ್ ಎದುರೇ ರೈತರೊಬ್ಬರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಾಲ್ಲೂಕಿನ ದೊಡ್ಡವಲ್ಲಭಿ ಗ್ರಾಮದ ರೈತ, ನಿವೃತ್ತ ಯೋಧ ನಾಗಪ್ಪ ಅವರ ಪುತ್ರ ಅಶ್ವತ್ಥನಾರಾಯಣ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
‘ಅಧಿಕಾರಿಗಳನ್ನು ಅಶ್ವತ್ಥನಾರಾಯಣಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ’ ಎಂದು ತಹಶೀಲ್ದಾರ್ ನಾಗರಾಜ್ ದೂರು ನೀಡಿದ್ದಾರೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಇದು ಗೋಮಾಳ ಜಮೀನು ಆಗಿದ್ದು, ವಿಷ ಕುಡಿಯುವ ನಾಟಕವಾಡಿ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿರುವರೈತನವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಐದು ದಿನಗಳ ಹಿಂದೆಯಷ್ಟೇ ನಾಗಪ್ಪ, ಸಾಗುವಳಿ ಚೀಟಿ ವಿಷಯವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಬುಧವಾರ ತಹಶೀಲ್ದಾರ್ ಸ್ಥಳ ಮಹಜರಿಗೆ ತೆರಳಿದ್ದರು.
ತಾಲ್ಲೂಕಿನ ನರಸಾಪುರ ಹೋಬಳಿ ದೊಡ್ಡವಲ್ಲಭಿ ಗ್ರಾಮದ ಸರ್ವೇ ನಂ.158 ರಲ್ಲಿ ನಾಗಪ್ಪ ಬಿನ್ ಮುನಿಶಾಮಪ್ಪ ಎಂಬುವವರಿಗೆ 3 ಎಕರೆ 16 ಗುಂಟೆಗೆ ಮಂಜೂರಾತಿ ನೀಡಲಾಗಿದೆ. ಆದರೆ, ಗ್ರಾಮಸ್ಥರು ತಕರಾರು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸಂಬಂದಿಸಿದಂತೆ ಸ್ಥಳ ಪರಿಶೀಲನೆಗೆ ತೆರಳಿದ್ದರು. ಆಗ ನಾಗಪ್ಪ ಅವರ ಪುತ್ರ ಆಶ್ವತ್ಥನಾರಾಯಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
‘ಗ್ರಾಮದ ಕೆಲವುವ್ಯಕ್ತಿಗಳು, ರಾಜಕಾರಣಿಗಳು ಎತ್ತಿಕಟ್ಟಿದ್ದಾರೆ. ಹೀಗಾಗಿ, ತಹಶೀಲ್ದಾರ್ ಹಾಗೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ತುಂಬಾ ತೊಂದರೆ ಎದುರಿಸುತ್ತಿದ್ದೇವೆ. ಭೂ ಮಂಜೂರಾಗಿದ್ದರೂ ನಮಗೆ ಸಾಗುವಳಿ ಚೀಟಿ ಕೊಡುತ್ತಿಲ್ಲ. ವಿಷ ಕುಡಿದು ಸಾಯುವ ಪರಿಸ್ಥಿತಿ ತಲುಪಿದ್ದೇವೆ’ ಎಂದು ಅಶ್ವತ್ಥನಾರಾಯಣ
ಆರೋಪಿಸಿದರು.
‘ಸಾಗುವಳಿ ಚೀಟಿ ಕೊಡಲು ಬರಲ್ಲ’
‘ನಾಗಪ್ಪ ಹಾಗೂ ಅಶ್ವತ್ಥನಾರಾಯಣ ಅವರಿಗೆ ಸಾಗುವಳಿ ಚೀಟಿ ಕೊಡಲು ಬರಲ್ಲ. ಇದು ಗೋಮಾಳ ಜಮೀನು. 15 ವರ್ಷಗಳಿಂದ ಜಮೀನು ಬೇರೆಯವರ ಸುಪರ್ದಿಯಲ್ಲಿತ್ತು. ಒಂದೂವರೆ ವರ್ಷದಿಂದ ಮಾತ್ರ ಇವರು ವ್ಯವಸಾಯ ಮಾಡುತ್ತಿದ್ದಾರೆ. ಭೂ ಮಂಜೂರಾತಿ ವೇಳೆ ಕಾನೂನು ಅನುಸರಿಸಿಲ್ಲ. ವಾಸ್ತವ ಸ್ಥಿತಿ ತಿಳಿಯಲು ಜಮೀನಿಗೆ ಹೋಗಿದ್ದೆ. ಗೋಮಾಳಕ್ಕೆ ಮೀಸಲಿಡಿ ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ’ ಎಂದು ಕೋಲಾರ ತಾಲ್ಲೂಕು ತಹಶೀಲ್ದಾರ್ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.