ಬಂಗಾರಪೇಟೆ: ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರಾಜಕೀಯ ಮಾಡಿದರೆ ಸಂಘ ಅಭಿವೃದ್ಧಿ ಆಗದು. ಆ ಕೆಲಸಕ್ಕೆ ಯಾರೂ ಕೈಹಾಕಬಾರದು ಎಂದು ಪರೋಕ್ಷವಾಗಿ ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ತಾಲ್ಲೂಕಿನ ಹುಲಿಬೆಲೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಘಟಕ ಮತ್ತು ಸ್ವಯಂ ಚಾಲಿತ ಹಾಲು ಕರೆಯುವ ಘಟಕ ಹಾಗೂ ನೂತನ ಸಭಾಂಗಣ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೋಲಾರದಲ್ಲಿ ಎಂ.ವಿ.ಕೃಷ್ಣಪ್ಪ ಗೋಲ್ಡನ್ ಡೇರಿ ಸ್ಥಾಪನೆಗೆ ಬಿಜೆಪಿ ಸರ್ಕಾರ ಅಡ್ಡಿಪಡಿಸಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ ನಂಜೇಗೌಡರು ತಮ್ಮ ಭಾಷಣದಲ್ಲಿ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, ವಿನಾಕಾರಣ ಬಿಜೆಪಿ ನೇತೃತ್ವದ ಸರ್ಕಾರವನ್ನು ತೇಜೋವಧೆ ಮಾಡುವುದು ಸರಿಯಿಲ್ಲ. ಸಹಕಾರ ಕ್ಷೇತ್ರ ಬೆಳವಣಿಗೆಗೆ ಸರ್ಕಾರ ಶ್ರಮಿಸುತ್ತಿದೆ. ಸರ್ಕಾರ ರೈತರ ಪರವಿದೆ ಎಂದರು.
ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಹಾಲು ಉತ್ಪಾದನೆ ಸಂಘಗಳು ಬಲಿಷ್ಟವಾಗಿವೆ. ಹಾಗಾಗಿ ರೈತರು ನೆಮ್ಮದಿಯಾಗಿ ಉಸಿರಾಡುವಂತಾಗಿದೆ. ಹಾಲು ಉತ್ಪಾದಕರ ಮಕ್ಕಳಿಗೆ ವಸತಿ ನಿಲಯಕ್ಕಾಗಿ ಬೆಂಗಳೂರಿನಲ್ಲಿ ಹಿಂದಿನ ಸರ್ಕಾರ ನಿವೇಶನ ನೀಡಿದೆ. ಅದು ಶೀಘ್ರದಲ್ಲೆ ತಲೆ ಎತ್ತಲಿದೆ ಎಂದರು.
ಕೋಲಾರದಲ್ಲಿ ಎಂ.ವಿ ಕೃಷ್ಣಪ್ಪ ಹೆಸರಲ್ಲಿ ಆಧುನಿಕವಾಗಿ ಗೋಲ್ಡನ್ ಡೇರಿ ನಿರ್ಮಾಣ ಮಾಡಲು ಒಕ್ಕೂಟ ಮುಂದಾಗಿದೆ. ಹಿಂದಿನ ಸರ್ಕಾರ ಶಂಕುಸ್ಥಾಪನೆ ಮಾಡಿತ್ತು. ಆದರೆ ಹಾಲಿ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಹಾಲು ಒಕ್ಕೂಟದ ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹಾದೇವ್, ಹುಲಿಬೆಲೆ ಹಾಲು ಸಂಘದ ಅಧ್ಯಕ್ಷ ಎಚ್.ಕೆ.ನಾರಾಯಣಸ್ವಾಮಿ, ತಾ.ಪಂ ಸದಸ್ಯ ಅಮರೇಶ್, ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ವಿ.ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.