ಕೋಲಾರ: ‘ಮುಂಬರುವ ಚುನಾವಣೆಯು ಭಯೋತ್ಪಾದಕರಿಗೆ ಬೆಂಬಲ ನೀಡುವವರು ಹಾಗೂ ಭಯೋತ್ಪಾದನೆ ಮಟ್ಟಹಾಕುವವರ ನಡುವಿನ ಹೋರಾಟ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬುಧವಾರ ಇಲ್ಲಿ ನಡೆದ ಬಿಜೆಪಿ ಓಬಿಸಿ ಮೋರ್ಚಾ ಸಭೆಯಲ್ಲಿ ಮಾತನಾಡಿ, ‘ಪಿಎಫ್ಐ ನಿಷೇಧದ ಬಗ್ಗೆ ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ. ಯಾರು ಭಯೋತ್ಪಾದನೆಗೆ ಬೆಂಬಲ ಕೊಡುತ್ತಾರೋ, ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅಂಥವರನ್ನೂ ನಿಷೇಧಿಸಬೇಕು. ಯಾವ ಜಾತಿ, ಯಾವ ಧರ್ಮ ಎಂಬುದು ಮುಖ್ಯ ಅಲ್ಲ’ ಎಂದರು.
‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ 23 ಕಾರ್ಯಕರ್ತರನ್ನು ಹತ್ಯೆ ಮಾಡಲಾಯಿತು. ಆಗ ಕಾಂಗ್ರೆಸ್ ಯಾವ ಸಂದೇಶ ನೀಡಿತು’ ಎಂದು ಪ್ರಶ್ನಿಸಿದರು.
‘ಪೊಲೀಸ್ ಠಾಣೆಯನ್ನೇ ಜಖಂಗೊಳಿಸಿದ್ದರು, ಹತ್ಯೆ ಮಾಡಿದ್ದರು. ಇಂಥ ಗಂಭೀರ ಘಟನೆಗಳಲ್ಲಿ ತೊಡಗಿದ್ದವರ ಮೇಲೆ ಕಾನೂನು ಚೌಕಟ್ಟಿನಲ್ಲಿ ಪ್ರಕರಣ ದಾಖಲಾಗಿದ್ದನ್ನು ಕಾಂಗ್ರೆಸ್ನವರು ವಾಪಸ್ ತೆಗೆದಿದ್ದರಿಂದ ಶಕ್ತಿ ಬಂದಿದೆ ಎಂಬ ಆರೋಪವೂ ಇದೆ. ಅದರಲ್ಲಿ ಸತ್ಯವೂ ಇದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.