ADVERTISEMENT

ಮನೆ ಕುಸಿತ: ಬಾಳೆ ತೋಟ ನಾಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 9:24 IST
Last Updated 27 ನವೆಂಬರ್ 2020, 9:24 IST
ಮಳೆ ಮತ್ತು ಗಾಳಿಗೆ ನೆಲಕಚ್ಚಿರುವ ಬೀನ್ಸ್‌
ಮಳೆ ಮತ್ತು ಗಾಳಿಗೆ ನೆಲಕಚ್ಚಿರುವ ಬೀನ್ಸ್‌   

ನಂಗಲಿ: ನಿವಾರ್ ಚಂಡಮಾರುತದ ಪರಿಣಾಮ ಭಾರೀ ಮಳೆ ಮತ್ತು ಗಾಳಿಗೆ ಮುಷ್ಟೂರು ಮತ್ತು ಪೆದ್ದೂರು ಗ್ರಾಮಗಳಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ.

ಮುಷ್ಟೂರು ಗ್ರಾಮದ ನಾಗಮಣಿ ಮತ್ತು ವಿಜಯಮ್ಮ, ಪೆದ್ದೂರು ಗ್ರಾಮದ ಸೂರ್ಯನಾರಾಯಣಪ್ಪ ಎಂಬುವರ ಮನೆಗಳು ಕುಸಿದು ಬಿದ್ದಿವೆ. ಮನೆಯಲ್ಲಿದ್ದ ದಿನಸಿ ಮತ್ತು ಇತರೆ ವಸ್ತುಗಳು ನಾಶಗೊಂಡಿವೆ. ಸೂರ್ಯನಾರಾಯಣಪ್ಪ ಅವರ ಕಾಲು ಮುರಿದಿದೆ.ಬೈರಕೂರು ಗ್ರಾಮದ ರಾಮಾಂಜಿ ಎಂಬುವರ ಮೂರು ಎಕರೆ ಬಾಳೆ ತೋಟ ಸಂಪೂರ್ಣವಾಗಿ ಕೆಳಗೆ ಬಿದ್ದಿದೆ. ಇದರಿಂದಾಗಿ ಸುಮಾರು ₹ 5 ಲಕ್ಷ ನಷ್ಟವಾಗಿದೆ ಎಂದು ರೈತ ರಾಮಾಂಜಿ ತಿಳಿಸಿದರು.

ಮಳೆಯಿಂದ ಮನೆಗಳು ಮತ್ತು ಬಾಳೆ ತೋಟ ನಾಶವಾದ ಸುದ್ದಿ ತಿಳಿದ ಕೂಡಲೆ ಸ್ಥಳಕ್ಕೆ ತಹಶೀಲ್ದಾರ್‌ ಕೆ.ಎನ್ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಆಯಾ ಗ್ರಾಮಗಳಲ್ಲಿ ತಾತ್ಕಾಲಿಕವಾಗಿ ಮನೆಗಳನ್ನು ಒದಗಿಸಿದರು. ಗಾಯಾಳು ಸೂರ್ಯನಾರಾಯಣಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.

ADVERTISEMENT

ನೆಲಕ್ಕುರುಳಿದ ಬೀನ್ಸ್‌ ತೋಟ: ಯಡಹಳ್ಳಿಯ ರೈತ ಷಣ್ಮುಗಂ ಎಂಬುವರ ಬೀನ್ಸ್ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ.

ಷಣ್ಮುಗಂ 1.5 ಎಕರೆ ಪ್ರದೇಶದಲ್ಲಿ ಬೀನ್ಸ್ ಬೆಳೆ ಬೆಳೆದಿದ್ದರು. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರುವ ಹಂತದಲ್ಲಿತ್ತು. ಗಾಳಿ ಮತ್ತು ಮಳೆಗೆ ತೋಟ ಸಂಪೂರ್ಣವಾಗಿ ನೆಲಕಚ್ಚಿದೆ. ಸ್ಥಳಕ್ಕೆ ತಹಶೀಲ್ದಾರ್ ರಾಜಶೇಖರ್ ಭೇಟಿ ನೀಡಿ ಪರಿಶೀಲಿಸಿ, ನಾಶವಾಗಿರುವ ತೋಟಕ್ಕೆ ಪರಿಹಾರ ಕೊಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.