ಕೋಲಾರ: ತಾಲ್ಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಪೈಪೋಟಿ ಜೋರಾಗಿದ್ದು, ಒಟ್ಟು 51 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಆಗಸ್ಟ್ 17ರಂದು ನಡೆಯಲಿರುವ ಚುನಾವಣೆಗೆ ಶುಕ್ರವಾರ ನಾಮಪತ್ರ ವಾಪಸಾತಿ ಪ್ರಕ್ರಿಯೆ ಅಂತ್ಯಗೊಂಡಿದೆ. ಒಟ್ಟು 17 ವಾರ್ಡ್ಗಳಿದ್ದು, 82 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಸುಮಾರು 31 ಸ್ಪರ್ಧಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡ ಮೇಲೆ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಬಹಳ ಕುತೂಹಲ ಮೂಡಿಸುತ್ತಿದೆ.
1ರಿಂದ 9 ವಾರ್ಡ್ಗಳಲ್ಲಿ ಸಲ್ಲಿಸಿದ್ದ 36 ನಾಮಪತ್ರಗಳಲ್ಲಿ 12 ಜನ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಇನ್ನುಳಿದ 24 ಜನ ಅಖಾಡದಲ್ಲಿದ್ದಾರೆ. 10 ರಿಂದ 17 ವಾರ್ಡ್ಗಳಲ್ಲಿ ಸಲ್ಲಿಸಿದ್ದ 47 ನಾಮಪತ್ರಗಳಲ್ಲಿ 19 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಇನ್ನುಳಿದ 27 ಜನ ಕಣದಲ್ಲಿದ್ದಾರೆ.
ವೇಮಗಲ್ ಟೌನ್ನಲ್ಲಿ ಬಿ 1 ಬ್ಲಾಕ್ನಲ್ಲಿ ದೀಪಾ ವಿನಯ್ ಮತ್ತು ಭವ್ಯಾ ಕೃಷ್ಣ ಸೇರಿದಂತೆ 5 ವಾರ್ಡ್ಗಳಲ್ಲಿ ನೇರ ಹಣಾಹಣಿ ಇದೆ. 9 ವಾರ್ಡ್ಗಳಲ್ಲಿ ತ್ರಿಕೋನ ಸ್ಪರ್ಧೆ ಹಾಗೂ ಇನ್ನುಳಿದ 3 ವಾರ್ಡ್ಗಳಲ್ಲಿ 4 ಮತ್ತು 5 ಜನ ಅಭ್ಯರ್ಥಿಗಳಂತೆ ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.
ವೇಮಗಲ್ ಎ1 ವಾರ್ಡ್ನ ಪಕ್ಷೇತರ ಅಭ್ಯರ್ಥಿಗಳಾದ ಶಿಲ್ಪಾ ಶಿವಶಂಕರ್ ಮತ್ತು ಭಾಗ್ಯಲಕ್ಷ್ಮಿ ನಾರಾಯಣಮೂರ್ತಿ ಇಬ್ಬರೂ ಹೊಲಿಗೆ ಯಂತ್ರ ಚಿಹ್ನೆಯೇ ಬೇಕೆಂದು ಹಟ ಹಿಡಿದರು. ಆಗ ಚುನಾವಣಾಧಿಕಾರಿ ಶಿವಾರೆಡ್ಡಿ ಹೊಲಿಗೆ ಯಂತ್ರದ ಗುರುತಿಗೆ ಲಾಟರಿ ಹಾಕಿದಾಗ ಶಿಲ್ಪಾ ಶಿವಶಂಕರ್ ಪಾಲಾಯಿತು.
ಬಿಜೆಪಿಯಿಂದ 9 ಹಾಗೂ ಜೆಡಿಎಸ್ ಪಕ್ಷದಿಂದ 8 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಎಲ್ಲಾ 17 ವಾರ್ಡ್ಗಳಲ್ಲಿ ಅಭ್ಯರ್ಥಿಗಳಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಬೆಂಬಲಿಗರಾಗಿಯೇ ಸ್ಪರ್ಧೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ 17 ವಾರ್ಡ್ಗಳಲ್ಲೂ ಕಣಕ್ಕಿಳಿದಿದೆ. ಆಮ್ ಆದ್ಮಿ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆ ಕುತೂಹಲ ಮೂಡಿಸಿದೆ. ಈಗಾಗಲೇ ಕಾರ್ಯಕರ್ತರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿದಾಟ ಪ್ರಕ್ರಿಯೆ ಜಾರಿಯಲ್ಲಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡ್ಗಳಿದ್ದು, ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 1ರಿಂದ 9ನೇ ವಾರ್ಡ್ಗೆ ಸಹಾಯಕ ಕೃಷಿ ನಿರ್ದೇಶಕ ಮುರಳಿ ಹಾಗೂ ಉಪ ತಹಶೀಲ್ದಾರ್ ಹೇಮಲತಾ, 10ರಿಂದ 17ನೇ ವಾರ್ಡ್ಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಹಾಗೂ ಉಪ ತಹಶೀಲ್ದಾರ್ ಶ್ರೀಕಾಂತ್ ಕಾರ್ಯನಿರ್ವಹಿಸುತ್ತಿದ್ದಾರೆ.
ಆ.17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಆ.20ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರದಲ್ಲಿ ನಡೆಯಲಿದೆ.
ಇದು ಕಾಂಗ್ರೆಸ್ ಪ್ರಚಾರ ಸಭೆ
ವೇಮಗಲ್–ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಯುಕ್ತ ಶನಿವಾರ ಬೆಳಿಗ್ಗೆ 11 ಗಂಟೆಗೆ ವೇಮಗಲ್–ನರಸಾಪುರ ರಸ್ತೆಯಲ್ಲಿರುವ ಎಂ.ಪಿ.ಆರ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಶಾಸಕ ಕೊತ್ತೂರು ಮಂಜುನಾಥ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖಂಡ ಕೆ.ವಿ.ಗೌತಮ್ ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.