ADVERTISEMENT

ಉತ್ಸವ ಮಾಡಿದವರು ಮರು ಆಯ್ಕೆಯಾಗಿಲ್ಲ!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 6:22 IST
Last Updated 26 ಏಪ್ರಿಲ್ 2013, 6:22 IST

ಕನಕಗಿರಿ: ಕನಕಗಿರಿ ಹಾಗೂ ಆನೆಗೊಂದಿ ಗಂಗಾವತಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧಿ ತಾಣಗಳಲ್ಲಿ ಪ್ರಮುಖವಾದವು.
ಮಾಜಿ ಉಪ ಮುಖ್ಯಮಂತ್ರಿ ದಿ. ಎಂ. ಪಿ. ಪ್ರಕಾಶ ಅವರ ಸತತ ಪರಿಶ್ರಮದಿಂದ ಆಗಿನ ಸರ್ಕಾರ ಹಂಪೆ, ಆನೆಗೊಂದಿ ಉತ್ಸವಗಳಿಗೆ ಚಾಲನೆ ನೀಡಿತು. ದುರದೃಷ್ಟ ಎಂದರೆ ಆನೆಗೊಂದಿ ಉತ್ಸವ ಆಚರಣೆ ಮಾಡಿದ ಶಾಸಕರು, ಸಚಿವರು ಮರು ಆಯ್ಕೆಯಾಗಿಲ್ಲ.

1994ರ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ನಾಗಪ್ಪ ಸಾಲೋಣಿ ನೂತನ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ 1998 ಅವಧಿಯಲ್ಲಿ ಪ್ರಥಮ ಸಲ ಆನೆಗೊಂದಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಾಲೋಣಿ ಎಂ. ಮಲ್ಲಿಕಾರ್ಜುನ ನಾಗಪ್ಪ ಅವರ ವಿರುದ್ಧ ಸೋಲುಂಡರು.

1999ರ ಎಸ್. ಎಂ. ಕೃಷ್ಣ ಸರ್ಕಾರದಲ್ಲಿಯೂ ಉತ್ಸವ ನಡೆಸಲಾಯಿತು. ರಾಜವಂಶಸ್ಥ ಶ್ರೀರಂಗದೇವರಾಯಲು ಆಗ ಗಂಗಾವತಿ ಶಾಸಕ. ಕನಕಗಿರಿ ಶಾಸಕರೂ ಆಗಿದ್ದ ಅಂದಿನ ಕಂದಾಯ ಮಂತ್ರಿ ಎಂ. ಮಲ್ಲಿಕಾರ್ಜುನ ನಾಗಪ್ಪ ಜಿಲ್ಲಾ ಉಸ್ತುವಾರಿ ಸಚಿವ. ಉತ್ಸವ ನಡೆಸಿದ ನಂತರದ 2004ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗದೇವರಾಯಲು ಹಾಗೂ ಎಂ. ಮಲ್ಲಿಕಾರ್ಜುನ ನಾಗಪ್ಪ ಸೋತು ಮನೆ ಸೇರಿದರು.

2004ರಲ್ಲಿ ಶಾಸಕರಾಗಿ ಆಯ್ಕೆಯಾಗಿ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಇಕ್ಬಾಲ್ ಅನ್ಸಾರಿ ಸಹ ಆನೆಗೊಂದಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.

2008 ಚುನಾವಣೆಯಲ್ಲಿ ಕನಕಗಿರಿ ಮೀಸಲು ಕ್ಷೇತ್ರವಾಗಿ ಬದಲಾದ ಕಾರಣ 2004ರ ಅವಧಿಯಲ್ಲಿ ಕನಕಗಿರಿ ಶಾಸಕರಾಗಿದ್ದ ಜಿ. ವೀರಪ್ಪ ಚುನಾವಣೆಯಿಂದ ದೂರ ಸರಿದರು.

2008ರ ಚುನಾವಣೆಯಲ್ಲಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಬಿಜೆಪಿಯ ಪರಣ್ಣ ಮುನವಳ್ಳಿ ವಿರುದ್ಧ 2 ಸಾವಿರ ಮತಗಳ ಅಂತರದಲ್ಲಿ ಸೋತರು.  ಪ್ರಥಮ ಬಾರಿಗೆ ಶಾಸಕರಾದ ಪರಣ್ಣ ಮುನವಳ್ಳಿ (ಗಂಗಾವತಿ) ಹಾಗೂ ಶಿವರಾಜ ತಂಗಡಗಿ (ಕನಕಗಿರಿ) ತಮ್ಮ ಕ್ಷೇತ್ರದಲ್ಲಿ ಉತ್ಸವ ಆಚರಣೆ ಮಾಡಿದ್ದಾರೆ, ಉತ್ಸವ ಆಚರಣೆ ಮಾಡಿದವರು ಮರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಗೊತ್ತಾಗಬೇಕಾದರೆ ಮೇ 8ರ ವರೆಗೆ ಕಾಯಬೇಕಾಗಿದೆ.
           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.