ಹನುಮಸಾಗರ: ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೆಳೆಯುವುದಕ್ಕೆ ಸೈ ಎನಿಸಿಕೊಂಡ ರೇಷ್ಮೆ ಬೆಳೆ ಎಂತಹ ಕಾಲದಲ್ಲೂ ರೈತನ ಕೈಹಿಡಿಯುವ ಬೆಳೆ ಎನಿಸಕೊಂಡಿದೆ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಹೇಳಿದರು.
ಸಮೀಪದ ಮಾವಿನಇಟಗಿ ಗ್ರಾಮದ ಗಂಗೂಬಾಯಿ ಜೋಷಿಯವರ ಹಿಪ್ಪೆನೇರಳೆ ತೋಟದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಕಡಿಮೆ ಭೂಮಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಮಾಣದ ಇಳುವರಿ ಪಡೆದು ಲಾಭದಾಯಕವೆನಿಸುವ ಬೆಳೆ ಇದಾಗಿದ್ದು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಬೆಳೆಯಲು ಮುಂದೆ ಬರಬೇಕು ಎಂದು ಅವರು ಹೇಳಿದರು.
ರೇಷ್ಮೆ ಬೆಳೆಯ ಸಂಶೋಧಕ ಡಾ. ವೈ.ಎನ್.ಸನತಕುಮಾರ ಮಾತನಾಡಿದರು. ರೇಷ್ಮೆ ಕೃಷಿ ಅಧಿಕಾರಿ ಬಿ.ಆರ್.ಗೌಡರ ರೈತರಿಗೆ ರೇಷ್ಮೆ ಬೆಳೆಯುವ ಕ್ರಮ, ನಾಟಿ ವಿಧಾನ, ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿದರು.
ಯರಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಪ್ಪ ತೆಳಗಡೆ ಕಾರ್ಯಕ್ರಮ ಉದ್ಘಾಟಿಸಿದರು.
ರೇಷ್ಮೆ ಕೃಷಿ ಅಧಿಕಾರಿಗಳಾದ ಸಿ.ಎಚ್.ಮುದಗಲ್, ರೈತ ಮಹಿಳೆ ಗಂಗೂಬಾಯಿ ಜೋಷಿ, ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಯರಗೇರಿ, ಗ್ರಾಮ ಪಂಚಾಯಿತಿ ಸದಸ್ಯೆ ಹುಲಿಗೆಮ್ಮ ಗೊಲ್ಲರ, ರೇಷ್ಮೆ ಪ್ರದರ್ಶಕ ಎಸ್.ಬಿ.ಗಣಾಚಾರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.