ಕೊಪ್ಪಳ: ಪರೀಕ್ಷಾ ಅಕ್ರಮ ಎಸಗುತ್ತಿದ್ದ ಇಲ್ಲಿನ ಕುಣಿಕೇರಿಯ ಹೇಮರೆಡ್ಡಿ ಮಲ್ಲಮ್ಮ ವಿದ್ಯಾ ಸಂಸ್ಥೆಯಲ್ಲಿನ ಕುವೆಂಪು ವಿವಿ ದೂರ ಶಿಕ್ಷಣ ಪರೀಕ್ಷಾ ಕೇಂದ್ರದ ಮೇಲೆ ಉಪವಿಭಾಗಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಭಾನುವಾರ ದಾಳಿ ನಡೆದಿದೆ.
ನಿರಂತರ ಅಕ್ರಮಗಳು ಮುಂದುವರಿದಿರುವುದು ಹಾಗೂ ಈ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ನಿರ್ದೇಶನದ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ ಉತ್ತರ ಪತ್ರಿಕೆ ವಶಪಡಿಸಿಕೊಂಡರು. ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ 26 ಮಂದಿಯ ಉತ್ತರ ಪತ್ರಿಕೆ ವಶಪಡಿಸಿಕೊಂಡು ಅಲ್ಲಿನ ದಾಖಲಾತಿ ಪರಿಶೀಲಿಸಿ ವಿವಿ ಮೇಲ್ವಿಚಾರಕರಿಗೆ ಹಸ್ತಾಂತರಿಸಿದರು.
ಇಂಥ ಕೇಂದ್ರಗಳಲ್ಲಿ ನಿರಂತರ ಅಕ್ರಮಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಗ್ಗೆ ವಿವಿಗೆ ಮಾಹಿತಿ ನೀಡಲಾಗಿದೆ. ವಿವಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಉಳಿದಂತೆ ಕೇಂದ್ರವನ್ನು ರದ್ದುಪಡಿಸುವುದು ಅಥವಾ ಕಾನೂನು ಕ್ರಮ ಜರುಗಿಸುವುದು ಜಿಲ್ಲಾಧಿಕಾರಿ ನಿರ್ಧಾರಕ್ಕೆ ಸಂಬಂಧಿಸಿದೆ ಎಂದು ಉಪವಿಭಾಗಾಧಿಕಾರಿ ಮಂಜುನಾಥ್ ತಿಳಿಸಿದರು. ವಾರ್ತಾಧಿಕಾರಿ ಬಿ.ವಿ.ತುಕಾರಾಮ್ ದಾಳಿ ಸಂದರ್ಭ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.