ಕನಕಗಿರಿ: ‘ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಈವರೆಗಿನ ಸಾಧನೆ ಶೂನ್ಯ’ ಎಂದು ಹಿರಿಯ ನಟ ಸತ್ಯಜಿತ್ ದೂರಿದರು.
ಸಮೀಪದ ಸೂಳೇಕಲ್ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಶಿವರಾಜ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸದ ನರೇಂದ್ರ ಮೋದಿ ಅವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಟೀಕಿಸಿದರು. ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ, ಈ ಹಿಂದೆ ಯಾವ ಶಾಸಕರೂ ಮಾಡದ ಕೆಲಸವನ್ನು ಶಾಸಕ ಶಿವರಾಜ ತಂಗಡಗಿ ಅವರು ಮಾಡಿ ತೋರಿಸಿದ್ದಾರೆ ಎಂದರು.
ಮಾಜಿ ಸಂಸದ ಶಿವರಾಮಗೌಡ ಸೂಗೂರು ಮಾತನಾಡಿ, ಮಾಡಿದ ಕೆಲಸದ ಲೆಕ್ಕ ಕೊಡುವ ತಂಗಡಗಿ ಅವರಿಗಿಂತ ರೊಕ್ಕ (ಹಣ) ಪಡೆದುಕೊಂಡು ಹೋಗುವ ವ್ಯಕ್ತಿ ಬಗ್ಗೆ ಮತದಾರರು ಜಾಗೃತಿ ವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ, ರಾಜಶೇಖರ ಮುಷ್ಟೂರು ಮಾತನಾಡಿದರು.
ಬ್ಲಾಕ್ ಅಧ್ಯಕ್ಷ ರಡ್ಡಿಶ್ರೀನಿವಾಸ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಕನಕಪ್ಪ ತಳವಾರ, ಸದಸ್ಯ ಮಲ್ಲಿಕಾರ್ಜುನಗೌಡ, ಕಾರಟಗಿ ವಿಶೇಷ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ, ಶಿವಶಂಕ್ರಪ್ಪ ಚನ್ನದಾಸರ ಪ್ರಮುಖರಾದ ಶೇಖರಗೌಡ ಪಾಟೀಲ, ಕೆ. ಲಕ್ಷ್ಮೀನಾರಾಯಣ, ಬಸವರಾಜ ಅರಳಹಳ್ಳಿ, ವಿರೂಪಾಕ್ಷಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.