ಯಲಬುರ್ಗಾ: ಪಟ್ಟಣದಲ್ಲಿ ಈಚೆಗೆ ನಡೆದ ಡಾ.ಅಂಬೇಡ್ಕರ್ ಟ್ರೋಪಿ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಗಂಜೇಂದ್ರಗಡ ತಂಡ ಜಯಸಾಧಿಸಿ ಪ್ರಥಮ ಬಹುಮಾನ ಪಡೆದುಕೊಂಡಿದೆ. ಹಾಗೆಯೇ ಸೋಲುಂಡ ಸ್ಥಳೀಯ ಡೆಂಜರ್ ಬಾಯ್ಸ ತಂಡ ಎರಡನೇ ಬಹುಮಾನ ಪಡೆದುಕೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜ ಭಜಂತ್ರಿ, ತಾಲ್ಲೂಕಿನಲ್ಲಿ ಕ್ರೀಡಾ ಚಟುವಟಿಕೆ ಸಾಕಷ್ಟಿದೆ ಆದರೆ ಅಷ್ಟೊಂದು ಹೇಳಿಕೊಳ್ಳುವಂತಹ ಕ್ರೀಡಾ ಸಾಧನೆಗಳಿಲ್ಲ, ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಹೆಚ್ಚು ಸಾಧನೆಯತ್ತ ಹೆಜ್ಜೆ ಹಾಕಬೇಕಾಗಿದೆ. ಜೊತೆಗೆ ವಿವಿಧ ಕ್ರೀಡೆಗಳ ಬಗ್ಗೆ ತರಬೇತಿ ನೀಡುವ ತರಬೇತುದಾರರು ಇರಬೇಕಾದುದು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಯುವ ಕಾಂಗ್ರೆಸ್ ಧುರೀಣ ಡಿ.ಕೆ. ಪರುಶುರಾಮ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕಳಕಪ್ಪ ಹೂಗಾರ, ವಿಕ್ರಮ ಛಲವಾದಿ, ರವಿಕುಮಾರ ವಸ್ತ್ರದ, ಆಸೀಮ ಹಿರೇಹಾಳ, ಕಿರಣಕುಮಾರ ಶರಣದವರ್ ಹಾಗೂ ಮತ್ತಿತರರು ಹಾಜರಿದ್ದರು. ಒಂದು ವಾರದ ಕಾಲ ಸ್ಥಳೀಯ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಿಯಲ್ಲಿ ಸುತ್ತಮುತ್ತಲಿನ ಹತ್ತಕ್ಕು ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.
ಸ್ಥಳೀಯ ಡೆಂಜರ್ ಬಾಯ್ಸ ಕ್ರಿಕೆಟ್ ತಂಡ ಹಾಗೂ ಮಂಜುಶ್ರೀ ಗ್ರಾಮೀಣಾಭಿವೃದ್ಧಿ ಜನಸೇವಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.