ADVERTISEMENT

ಮಣ್ಣಿನ ಫಲವತ್ತತೆಗೆ ಜೈವಿಕ ಗೊಬ್ಬರ ಬಳಸಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 8:48 IST
Last Updated 6 ಡಿಸೆಂಬರ್ 2017, 8:48 IST

ಕೊಪ್ಪಳ: ಕೃಷಿಯಲ್ಲಿ ಯಥೇಚ್ಛವಾಗಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕಾಪಾಡಿಕೊಳ್ಳಬಹುದು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಂ.ಚಿತ್ತಾಪುರ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಮಂಗಳವಾರ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರಿಗೆ ಮಣ್ಣಿನ ಫಲವತ್ತತೆಯ ಜಾಗೃತಿ ಮೂಡಿಸುವುದಕ್ಕಾಗಿ ಈ ದಿನಾಚರಣೆ ಆಚರಿಸಲಾಗುತ್ತದೆ. ಹಾಗೆಯೇ, ಕಲ್ಲಿನಿಂದ ಮಣ್ಣುರಚನೆ ಆಗಬೇಕಾದರೆ ಒಂದು ಸಾವಿರ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಪ್ರತಿಯೊಬ್ಬ ರೈತರು ಮಣ್ಣು ಆರೋಗ್ಯ ಕಾರ್ಡ್‌ ಪಡೆದು ಅದರಲ್ಲಿ ಶಿಫಾರಸು ಮಾಡಿರುವ ಪ್ರಮಾಣದಷ್ಟು ರಾಸಾಯನಿಕ ಬಳಕೆಯನ್ನು ಉಪಯೋಗಿಸಬೇಕು ಎಂದರು.

ADVERTISEMENT

ಕೃಷಿಕ ಸಮಾಜದ ತಾಲ್ಲೂಕಾಧ್ಯಕ್ಷ ಎನ್.ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಣ್ಣು ಪರೀಕ್ಷೆ ಮಾಡಿ, ತಮ್ಮ ಜಮೀನಿನಲ್ಲಿ ವಿಜ್ಞಾನಿಗಳು ಶಿಫಾರಸು ಮಾಡಿದಷ್ಟು ರಾಸಾಯನಿಕ ಗೊಬ್ಬರ ಮಾತ್ರ ಉಪಯೋಗಿಸಬೇಕು. ಇಂದಿನ ಕೃಷಿಯನ್ನು ನಾವು ವೈಜ್ಞಾನಿಕವಾಗಿ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡ್ಕಿ ಮಾತನಾಡಿ, 'ರೈತರು ಒಕ್ಕಲುತನದಲ್ಲಿ ಲಾಭವಿಲ್ಲ ಎಂದು ಹಳ್ಳಿಗಳಿಂದ ನಗರಗಳಿಗೆ ಮುಖ ಮಾಡುತ್ತಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಒಕ್ಕಲುತನದಲ್ಲಿ ತುಂಬಾ ಲಾಭವಿದೆ. ನಂತರ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಿ ರೈತರೊಂದಿಗೆ ಮಣ್ಣು ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ಸಂವಾದ ಆಯೋಜಿಸಬೇಕು' ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದ್ಯಾಮಣ್ಣ, ಕೃಷಿ ವಿಸ್ತರಣಾ ಮುಂದಾಳು ಎಂ.ಬಿ.ಪಾಟೀಲ್‌, ಪ್ರಗತಿಪರ ರೈತ ವೆಂಕನಗೌಡ್ರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ವೆಂಕಣ್ಣ, ಪ್ರಭಾರ ಕೃಷಿ ನಿರ್ದೇಶಕ ರಾಮಚಂದ್ರ ಜೋಷಿ ಇದ್ದರು. ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥ ಬಿ.ಎಂ.ಗೊಬ್ಬರಗುಂಪಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.