ಕುಕನೂರು: ಮೋಡಕವಿದ ವಾತಾವ ರಣವಿದ್ದರೂ ಮಳೆ ಮಾತ್ರ ಬೀಳುತಿಲ್ಲ. ಬೆಳಿಗ್ಗೆಯಿಂದ ಮಧ್ಯಾಹ್ನ ವರೆಗೆ ಮಳೆಯ ಭರವಸೆ ಮೂಡಿಸುವ ಮೋಡ ಗಳು ಸಂಜೆಗೆ ಕಣ್ಮರೆಯಾಗುತ್ತಿವೆ. ಕುಕನೂರು ನಾಲ್ಕು ವರ್ಷಗಳಿಂದ ಬರಕ್ಕೆ ತುತ್ತಾಗಿದೆ. ಈ ವರ್ಷ ಸರಿಯಾಗಿ ಮಳೆ–ಬೆಳೆಯಾಗುವುದು ಎಂಬ ನಿರೀಕ್ಷೆಯ ಇತ್ತು. ಆದರೆ, ಬರದ ಛಾಯೆ ಎಲ್ಲೆಡೆ ಕಂಡುಬರುತ್ತಿದೆ.
ಈಗಾಗಲೇ ಶೇ 80ರಷ್ಟು ಬೆಳೆಗಳು ಬಿತ್ತನೆಯಾಗಿದ್ದು, ಮೊಳಕೆಯೊಡೆದಿದ್ದ ಬೆಳೆಗಳು ನೀರಿನ ಅಭಾವದಿಂದಾಗಿ ಒಣಗಲಾರಂಭಿಸಿವೆ. ಮಳೆಗಾಗಿ ಆಕಾಶ ದತ್ತ ನೋಡುವ ಸ್ಥಿತಿ ರೈತರಿಗೆ ಒದಗಿದೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮೀರಿ ನಡೆದಿದೆ. ಆದರೆ, ಈಗ ಬೆಳೆಗಳು ಮಳೆ ಇಲ್ಲದೆ ಬಾಡಿವೆ. ರೈತರು ಕೈಯಲ್ಲಿದ್ದ ಹಣವನ್ನು ಗೊಬ್ಬರ, ಬಿತ್ತನೆ ಬೀಜಕ್ಕಾಗಿ ಸುರಿದು ಆತಂಕಕ್ಕೆ ಒಳಗಾಗಿದ್ದಾರೆ.
‘ಮುಸುಕಿನ ಜೋಳ, ಶೇಂಗಾ, ತೊಗರಿ, ಅಲಸಂದಿ ಒಣಗಿವೆ. ಈ ವರ್ಷವೂ ಬರತಪ್ಪಿದ್ದಲ್ಲ ಎಂಬ ಚಿಂತೆ ಕಾಡುತ್ತಿದೆ. ಕುಡಿಯುವ ನೀರು, ಹಸುಗಳ ಮೇವುಗಳಿಗೂ ಬವಣೆ ಅನುಭವಿಸುತ್ತಿದ್ದೇವೆ’ ಎಂದು ರೈತ ಭರಮಪ್ಪ ಆತಂಕ ವ್ಯಕ್ತಪಡಿಸಿದರು.
‘ಬೆಳೆಗಳು ಒಣಗಿರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಬೇಕು. ಹೋಬಳಿವಾರು, ಗ್ರಾಮ ವಾರು ಸಮೀಕ್ಷೆ ನಡೆಸಬೇಕು’ ಎಂದು ರೈತ ಕನಕಪ್ಪ ತಳವಾರ ಒತ್ತಾಯಿಸಿದರು.
* *
ಶೇ 78ರಷ್ಟು ಬಿತ್ತನೆ ಮುಗಿದಿದೆ. ಖುಷ್ಕಿ ಬೆಳೆಗಳು ಒಣಗಲಾರಂಭಿಸಿವೆ. ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳುಹಿಸುತ್ತೇವೆ.
–ಶರಣಪ್ಪ ಗುಂಗಾಡಿ,
ಕೃಷಿ ಅಧಿಕಾರಿ, ಕುಕನೂರು ವಲಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.