ADVERTISEMENT

ಸಾಕ್ಷರತೆಯಿಂದ ಮಹಿಳೆಯರ ಸಬಲೀಕರಣ: ಕಾವೇರಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 10:55 IST
Last Updated 21 ಜನವರಿ 2012, 10:55 IST

ಕನಕಗಿರಿ: ಮಹಿಳೆಯರ ಸಾಕ್ಷರತೆ ಶೇ. 50ಕ್ಕಿಂತ ಕಡಿಮೆ ಇರುವ 18 ಜಿಲ್ಲೆಗಳಲ್ಲಿ `ಸಾಕ್ಷರ ಭಾರತ~ ಕಾರ್ಯಕ್ರಮ ಅನುಷ್ಠಾನದಲ್ಲಿದೆ ಎಂದು ಲೋಕ ಶಿಕ್ಷಣ ಇಲಾಖೆಯ ರಾಜ್ಯ ನಿರ್ದೇಶಕಿ ಬಿ. ವಿ. ಕಾವೇರಿ ತಿಳಿಸಿದರು.

ಇಲ್ಲಿನ ಮಾದರಿ ಗ್ರಾಮ ಪಂಚಾಯಿತಿ ಲೋಕ ಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಹಾಗೂ ಲೋಕ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ವಯಸ್ಕರ ಶಿಕ್ಷಣಕ್ಕಾಗಿ ಗಣಕ ಯಂತ್ರಗಳ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡದ ಜಿಲ್ಲೆಗಳಿಗೆ ಹೋಲಿಸಿದರೆ ಯಾದಗಿರಿ, ಕೊಪ್ಪಳ ಸೇರಿದಂತೆ ಈ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆ ಇದೆ, ದಿನದ ಕೂಲಿ ಬಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವಂತ ದುಸ್ಥಿತಿ ಇಲ್ಲಿರುವುದರಿಂದ ಮಹಿಳೆಯರ ಸ್ಥಾನಮಾನ ಕುಸಿದಿದೆ ಎಂದು ಅವರು ವಿಷಾದಿಸಿದರು.

ಸಾಕ್ಷರತೆಯಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಿದೆ, ಮಹಿಳೆಯರ ಸ್ಥಾನಮಾನ ಸುಧಾರಣೆಯಾಗುವಲ್ಲಿ ಶಿಕ್ಷಣದ ಪಾತ್ರ ಸಾಕಷ್ಟು ಎಂದು ತಿಳಿಸಿದರು.

ಕೇವಲ ಸರ್ಕಾರ, ಲೋಕ ಶಿಕ್ಷಣ ಸಮಿತಿ ಕೇಂದ್ರದಿಂದ ಮಾತ್ರ ಮಹಿಳೆಯರ ಶಿಕ್ಷಣದ ಮಟ್ಟ ಹೆಚ್ಚಿಸಬಹುದೆಂಬ ಮಾತು ಸುಳ್ಳು, ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹಾಗೂ ಮಾಧ್ಯಮಗಳು ಕೂಡ ಈ ಕೆಲಸಕ್ಕೆ ಕೈಜೋಡಿಸಬೇಕೆಂದು ಕಾವೇರಿ ಮನವಿ ಮಾಡಿಕೊಂಡರು.

ವಯಸ್ಕರ ಹಾಗೂ ಶಾಲಾ ಶಿಕ್ಷಣ ಪಡೆಯುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿವೆ, ಜನತೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಸೋಮಶೇಖರಗೌಡ ಮಾತನಾಡಿ ಸಾಕ್ಷರತೆ ಕಲಿಕೆಗೆ ಮಾತ್ರ ಸೀಮಿತವಾಗಿಲ್ಲ, ಕಂಪ್ಯೂಟರ್, ಆರೋಗ್ಯ, ಜಲಾನಯನ ಇತರೆ ಇಲಾಖೆಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನವ ಸಾಕ್ಷರರಿಗೆ ಸ್ಪರ್ಧಾತ್ಮಕ ಜ್ಞಾನ ನೀಡಲು ವಿವಿಧ ಪುಸ್ತಕ, ಪತ್ರಿಕೆಗಳ ಸೌಲಭ್ಯ ಒದಗಿಸಲಾಗಿದೆ  ಎಂದು ತಿಳಿಸಿದರು.

ವೃತ್ತಿ ಕೌಶಲಗಳನ್ನು ಬೆಳಸುವುದರ ಜತೆಗೆ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವುದರ ಕಡೆಗೆ ಗಮನ ನೀಡಲಾಗಿದೆ ಎಂದು ತಿಳಿಸಿದರು.

ಈ ಸಾಲಿನಲ್ಲಿ ಸಾಕ್ಷರತಾ ಪ್ರಮಾಣದಲ್ಲಿ ಶೇ 80 ರಷ್ಟು ಗುರಿ ಸಾಧಿಸಲು ಯೋಜಿಸಲಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಬಸರಿಗಿಡದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಣ್ಣ ಸಮಗಂಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸರ್ವಮಂಗಳಾ ಭೂಸನೂರಮಠ, ತಾಲ್ಲೂಕು ಕಾರ್ಯಕ್ರಮ ಅಧಿಕಾರಿ ದೇವಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕಡಿವಾಳರ, ಶಿಕ್ಷಕ ಪ್ರಭಾಕರ ಬಡಿಗೇರ, ಇಲಾಖೆಯ ಸೋಮಶೇಖರ ತುಪ್ಪದ, ಪ್ರೇರಕ ಶಾಮೀದಸಾಬ ಲೈನದಾರ ಇತರರು ಹಾಜರಿದ್ದರು.
ಪರಸಪ್ಪ ಹೊರಪೇಟೆ ಸ್ವಾಗತಿಸಿದರು. ರಾಜಾನಾರಾಯಣ ಅರಳಿಕಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.