ಯಲಬುರ್ಗಾ: ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಸಭೆಗೆ ಹಾಜರಾಗದ ಅಧಿಕಾರಿಗಳು ಜನತೆಗೆ ಎಷ್ಟರ ಮಟ್ಟಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುತ್ತೀದ್ದೀರಿ ಎಂಬುದು ಈ ಮೂಲಕ ಸ್ಪಷ್ಟವಾಗುತ್ತಿದೆ.
ಸುಮಾರು 23ಇಲಾಖೆಗಳ ಪೈಕಿ ಕೇವಲ 7ಇಲಾಖೆಯ ಅಧಿಕಾರಿಗಳು ಹಾಜರಾಗಿದ್ದನ್ನು ಗಮನಿಸಿದ್ದರೆ ಇಲ್ಲಿಯ ಅಧಿಕಾರಿಗಳು ನೌಕರಿ ಮಾಡುತ್ತಿದ್ದಾರೋ ಇಲ್ಲೋ ಎಂಬುದು ಗೊತ್ತಾಗುತ್ತಿಲ್ಲ, ಈ ಕುರಿತು ಪ್ರತಿ ಸಭೆಯಲ್ಲಿ ಕಟುವಾಗಿ ಟೀಕಿಸಿದರೂ ಸುಧಾರಿಸಿಕೊಳ್ಳದಿರುವುದು ನಿಜಕ್ಕು ವಿಪರ್ಯಾಸ ಸಂಗತಿ ಎಂದು ತಾಪಂ ಇಒ ಕೆ.ಬಿ. ಅಕ್ಕೋಜಿ ಅಸಮಾಧಾನ ವ್ಯಕ್ತಪಡಿಸಿದರು.
ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ವಿವಿಧ ಯೋಜನೆಗಳು ಎಷ್ಟರಮಟ್ಟಿಗೆ ಅನುಷ್ಠಾನಗೊಳಿಸಲಾಗಿದೆ ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದರು.
ಪಶು ಸಂಗೋಪನೆ ಇಲಾಖೆಗೆ ಸಂಬಂಧಿಸಿದಂತೆ, ವಿಶೇಷ ಘಟಕ ಯೋಜನೆ ಅಡಿಯಲ್ಲಿ ನಾಲ್ಕು, ಗಿರಿಜನ ಉಪಯೋಜನೆಯಲ್ಲಿ ಎರಡು ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಇದರಲ್ಲಿ ಶೇ 3ರಷ್ಟು ಅಂಗವಿಕಲರಿಗೆ ಮೀಸಲಿಡುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಪಶು ವೈದ್ಯಾಧಿಕಾರಿ ಅನಂತರಾವ್ ತಿಳಿಸಿದರು.
ಸುಧಾರಿತ ತರಕಾರಿ ಬೀಜಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು, ರೈತ ಮಹಿಳೆಯರಿಗೆ ಹಣ್ಣು ಸಂಸ್ಕರಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆ ವತಿಯಿಂದ ನಡೆಸಲಾಗುವುದು. `ಗುಚ್ಚ ಗ್ರಾಮ~ ಎಂಬ ನೂತನ ಯೋಜನೆಯನ್ನು ಪ್ರಸಕ್ತ ವರ್ಷದಿಂದ ಜಾರಿಗೊಳ್ಳಲಿದ್ದು, ಒಂದೇ ಪ್ರದೇಶದ ಸುಮಾರು 200ಎಕರೆ ಒಂದೇ ಬೆಳೆ ಬೆಳೆಯುವ ಉದ್ದೇಶ ಇದ್ದಾಗಿದ್ದು, ಇದಕ್ಕೆ ಸರ್ಕಾರ ವಿವಿಧ ರೀತಿಯ ಆರ್ಥಿಕ ನೆರವು ನೀಡಲಿದೆ ಎಂದು ಮಹಾದೇವಪ್ಪ ಕಮ್ಮಾರ ತಿಳಿಸಿದರು.
ಸಭೆಗೆ ಸಂಬಂಧಿಸಿದ ವರದಿಯನ್ನು ಓದದೇ ಯಾವುದೋ ಹಳೆಯ ವರದಿಯನ್ನು ಓದಿ ಟೀಕೆಗೆ ಒಳಗಾದ ಅಂಗನವಾಡಿ ಮೇಲ್ವಿಚಾರಕಿ ಕುಲಕರ್ಣಿ ಅವರಿಗೆ, ಅರ್ಧಕ್ಕೆ ನಿಂತ ಅಂಗನವಾಡಿಗಳ ಪಟ್ಟಿಯನ್ನು ತಯಾರಿಸಿ ಕೊಡುವಂತೆ ಕಳೆದ ಸಭೆಯಲ್ಲಿಯೇ ಒತ್ತಾಯಿಸಿದ್ದರೂ ಇನ್ನೂವರೆಗೆ ಕೊಟ್ಟಿಲ್ಲ, ಈ ರೀತಿಯ ನಿರ್ಲಕ್ಷ್ಯ ಸರಿಯಲ್ಲ ಎಂದು ಇಒ ಬೇಸರ ವ್ಯಕ್ತಪಡಿಸಿದರು.
ರೇಷ್ಮೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ, ಈ ನಿಟ್ಟಿನಲ್ಲಿ ವಿವಿಧ ಪ್ರಚಾರ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಪರಸಪ್ಪ ನಾಯಕ ಹಾಗೂ ಇಒ ಸಲಹೆ ನೀಡಿದರು.
ತಾಪಂ ಸದಸ್ಯರಾದ ಲಕ್ಷ್ಮಿದೇವಿ ರಡ್ಡೇರ್, ಲಲಿತವ್ವ ಕೊಟಗಿ, ಫಕೀರಪ್ಪ ತಳವಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.