ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜನ, ಜಾನುವಾರುಗಳಿಗೆ ಕುಡಿಯುವುದಕ್ಕಾಗಿ ನೀರು ಬಿಡಲಾಗಿದೆ. ಇಲ್ಲಿಯ 31ನೇ ಕಾಲುವೆಗೆ ಗುರುವಾರದಿಂದ ನೀರು ಬಿಡಲಾಗಿದ್ದು, ದೇವಿಕ್ಯಾಂಪ್ ತಿರುವು ಬಳಿ ಭಾರಿ ಪ್ರಮಾಣದ ನೀರು ಪೋಲಾಗಿ, ಪಕ್ಕದ ಜಮೀನುಗಳಿಗೆ ಹರಿದಿದೆ.
ನಾಲೆ ಭೋಂಗಾ ಬಿದ್ದಿದೆ ಎಂಬ ವದಂತಿ, ಆತಂಕದಿಂದ ನೂರಾರು ನಾಗರಿಕರು ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಶುಕ್ರವಾರ ಕಂಡುಬಂತು.ಕುಡಿಯುವ ನೀರಿನ ಯೋಜನೆಯ ಪೈಪ್ ನಾಲೆಯ ಮುಖಾಂತರ ಹೋಗಿದ್ದು, ಇದಕ್ಕಾಗಿ ಒಳಮೈ ಹೊಡೆಯಲಾಗಿದೆ.
ಅದೇ ಸ್ಥಳದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗಿರುವುದು ಕಂಡುಬಂತು. ಒಳಮೈ, ಹೊರಮೈ ಶಿಥಿಲಗೊಂಡಿದೆ. ಮುಂದೆ ನೀರು ಬಿಡುವುದರೊಳಗೆ ದುರಸ್ತಿ ಮಾಡಿಸಲು ಇಲಾಖೆ ಮುಂದಾಗಬೇಕು ಎಂದು ಸ್ಥಳದಲ್ಲಿದ್ದ ಬೂದಗುಂಪಾದ ವೀರನಗೌಡ, ಪಾಮಣ್ಣ ಗಿಣಿವಾರ ಆಗ್ರಹಿಸಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎ. ಬಿ. ಚಿಕೊಪ್ಪ, ಸೂಗಪ್ಪ ಭೇಟಿಯಾದ `ಪ್ರಜಾವಾಣಿ~ಯೊಂದಿಗೆ ಮಾತನಾಡಿ `ದೇವಿಕ್ಯಾಂಪ್ ತಿರುವು ಬಳಿಯ ಸೇತುವೆಯಲ್ಲಿ ಅಧಿಕ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹಗೊಂಡು ನೀರು ಮುಂದೆ ಹೋಗದೆ ನಾಲೆಯ ಹೊರಗೆ ಹರಿದಿದೆ.
ತ್ಯಾಜ್ಯ ತಗೆಯಿಸಿದ್ದು, ನೀರಿನ ಹರಿಯುವಿಕೆ ಸಹಜವಾಗಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಂಗ್ರಹಕ್ಕಾಗಿ ನಾಲೆಯಲ್ಲಿ ನೀರು ಬಿಡಲಾಗಿದೆ. ಇದರಿಂದ ಗಂಗಾವತಿ ಹಾಗೂ ಸಿಂಧನೂರ ತಾಲ್ಲೂಕು ವ್ಯಾಪ್ತಿಯಲ್ಲಿ ಕೆರೆಗಳನ್ನು ತುಂಬಿಸಿಕೊಂಡು ಮುಂದೆ ಉಪಯೋಗಿಸಿಕೊಳ್ಳಲು ಅನುಕೂಲ ಆಗಲಿದೆ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.