ಕೊಪ್ಪಳ: ‘ಕವಿಗೆ ಸಾಮಾಜಿಕ ಕಳಕಳಿ ತುಂಬಾ ಮುಖ್ಯ. ಅಂಥ ಗುಣ ಕವಿಗಳಲ್ಲಿ ಇರಬೇಕಾದದ್ದು ಅಗತ್ಯ‘ ಎಂದು ಸಾಹಿತಿ ಈಶ್ವರ ಹತ್ತಿ ಹೇಳಿದರು.
ಸ್ಥಳೀಯ ಶಕ್ತಿ ಶಾರದೆಯ ಮೇಳ ಭಾನುವಾರ ಏರ್ಪಡಿಸಿದ್ದ ಮಾಸಿಕ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕವಯಿತ್ರಿ ಬಸಮ್ಮ ಅಂಕಲಿ ಅವರ ಕವನ ಸಂಕಲನ 'ಮಾತು ಮರಿ ಹಾಕಿದಾಗ' ಲೋಕಾರ್ಪಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಕವಿಗೆ ನಿತ್ಯದ ಓದು ಕಾವ್ಯ ಕಟ್ಟುವಲ್ಲಿ ಅನುವು ಮಾಡಿಕೊಡುತ್ತದೆ. ಹಾಗಾಗಿ ಕವಿ ದಿನಪತ್ರಿಕೆ ಇಲ್ಲವೆ ನಿಯತ ಕಾಲಿಕೆಗಳನ್ನು ಓದುವ ಮನಸ್ಸುಳ್ಳವರಾಗಿರಬೇಕು’ ಎಂದು ಹೇಳಿದರು.
ಸಂಕಲನ ಲೋಕಾರ್ಪಣೆ ಮಾಡಿದ ಕವಿ ರಾಮಣ್ಣ ಅಲ್ಮರ್ಸಿಕೇರಿ ಮಾತನಾಡಿ ‘ಹೆಣ್ಣಿನ ಬದುಕಿನ ನಿತ್ಯದ ಗೋಳು ಸಂಕಲನ ಅನೇಕ ಕವಿತೆಗಳಲ್ಲಿ ಒಡಮೂಡಿದೆ. ಅಂದರೆ ಕವಯಿತ್ರಿ ಹೆಣ್ಣಿನ ಬದುಕಿನ ತೊಳಲಾಟ ಹತ್ತಿರದಿಂದ ಅರಿತು ಕಾವ್ಯಕ್ಕೆ ಇಳಿಸುವಲ್ಲಿ ಸಫಲತೆ ಕಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕವಿ ರಮೇಶ ಬನ್ನಿಕೊಪ್ಪ, ಸಾಹಿತಿ ಅರುಣಾ ನರೇಂದ್ರ ಪಾಟೀಲ, ಕವಯಿತ್ರಿ ಬಸಮ್ಮ ಅಂಕಲಿ, ಕಾರ್ಯಕ್ರಮ ಸಂಘಟಕ ಡಿ ಎಂ ಬಡಿಗೇರ, ಸಾಹಿತಿ ಎ.ಎಂ. ಮದರಿ, ವಿಜಯಲಕ್ಷ್ಮಿ ಕೊಟಗಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಹಾಂತೇಶ ನೆಲಾಗಣಿ, ಉಮೇಶ ಕಾತರಕಿ, ಶಿವಪ್ರಸಾದ ಹಾದಿಮನಿ, ಶಿ.ಕಾ. ಬಡಿಗೇರ, ಮಹೇಶ ಬಳ್ಳಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.