ಕೊಪ್ಪಳ: ಕೃಷಿ ಪರಿಕರಗಳ ಮಾರಾಟಗಾರರು ತಮ್ಮಲ್ಲಿ ಬರುವ ರೈತರಿಗೆ ವೈಜ್ಞಾನಿಕವಾಗಿ ಮಾಹಿತಿ ನೀಡಬೇಕು. ಅವರ ಆದಾಯ ದುಪ್ಪಟ್ಟು ಆಗಲು ನೆರವಾಗಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಡಿ.ಎಂ. ಚಂದರಗಿ ಹೇಳಿದರು.
ಇಲ್ಲಿ ಸೋಮವಾರ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸ್ ಪ್ರಮಾಣ ಪತ್ರದ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಕೃಷಿ ಪರಿಕರಗಳ ಮಾರಾಟಗಾರರಿಗೆ 48 ವಾರಗಳ ಕಾಲ ಶಿಸ್ತುಬದ್ಧವಾಗಿ ತರಬೇತಿ ನೀಡಲಾಗಿದೆ. ಇದಕ್ಕೆ ದೇಶಿ ಕೃಷಿ ವಿಸ್ತರಣಾ ಕೇಂದ್ರದ ಫೆಸಿಲಿಟೇಟರ್ ಎಸ್.ಬಿ. ಕೋಣಿ ಅವರ ಶ್ರಮ ಇದರಲ್ಲಿ ಅಡಗಿದೆ‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
’ಪರಿಕರಗಳ ಮಾರಾಟಗಾರರ ಜೊತೆ ರೈತರು ನಿರಂತರವಾಗಿ ವಹಿವಾಟು ನಡೆಸುವುದರಿಂದ ಅವರ ಬಾಂಧವ್ಯ ಚೆನ್ನಾಗಿ ಇರುತ್ತದೆ. ವ್ಯಾಪಾರಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ರೈತರಿಗೆ ಕೃಷಿ ಕ್ಷೇತ್ರದ ಹೊಸ ಸಂಶೋಧನೆ, ವೈಜ್ಞಾನಿಕ ವಿಧಾನಗಳನ್ನು ತಿಳಿಸಿಕೊಡಬೇಕು. ದೇಶದ ಆರ್ಥಿಕ ಪರಿಸ್ಥಿತಿ ಕೃಷಿ ಮೇಲೆ ಅವಲಂಬಿತವಾಗಿದ್ದರಿಂದ ರೈತರ ಅಭಿವೃದ್ಧಿ ಮಹತ್ವದ್ದಾಗಿದೆ‘ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೋಡಲ್ ಅಧಿಕಾರಿ (ದೇಸಿ) ಡಾ. ಎಂ. ಗೋಪಾಲ, ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿ ಡಾ. ನಾಗೇಶ, ಜಂಟಿ ನಿರ್ದೇಶಕ ಸದಾಶಿವ ವಿ., ರಾಯಚೂರು ಕೃಷಿ ವಿ.ವಿ. ವ್ಯವಸ್ಥಾಪನಾ ಮಂಡಳಿ ಸದಸ್ಯ ಜಿ. ಶ್ರೀಧರ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡಿ, ಕೃಷಿ ತಂತ್ರಜ್ಞರ ಸಂಸ್ಥೆ ಕಾರ್ಯದರ್ಶಿ ವೀರಣ್ಣ ಕೆ. ಕಮತರ, ಕೃಷಿ ವಿಸ್ತರಣಾ ಕೇಂದ್ರದ ನೋಡಲ್ ಅಧಿಕಾರಿ (ದೇಸಿ ಕಾರ್ಯಕ್ರಮ) ಡಾ. ಎಂ.ಬಿ. ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.