
ಕುಷ್ಟಗಿ: ವಿವಾದಿತ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ ಎಂದು ಆರೋಪಿಸಲಾಗಿರುವ ತಾಲ್ಲೂಕಿನ ತಾವರಗೇರಾದ 13ನೇ ಸಂಖ್ಯೆ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ದಿಢೀರನೇ ಉದ್ಘಾಟನೆ ನೆರವೇರಿಸಲಾಗಿದೆ.
ಸರ್ಕಾರದ ಲಕ್ಷಾಂತರ ಅನುದಾನದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ. ಆದರೆ ಸಂಬಂಧಿಸಿದ ಜಾಗ ಭೂ ಪರಿವರ್ತನೆಗೊಂಡಿದ್ದರೂ ಸಂಬಂಧಿಸಿದ ಕುಟುಂಬಗಳ ಮಧ್ಯೆ ಆಸ್ತಿ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಕಾರಣಕ್ಕೆ ಕೇಂದ್ರದ ಉದ್ಘಾಟನೆ ನೆರವೇರಿಸಿಲ್ಲ ಎಂದೆ ಇಲ್ಲಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ ಹಂಡಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದರು.
ಅಷ್ಟೇ ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಉದ್ಘಾಟನೆ ನೆರವೇರಿಸದಂತೆ ತಾವರಗೇರಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿಡಿಪಿಒ ಅವರಿಗೆ ಪತ್ರ ಬರೆದಿದ್ದರು. ಉದ್ಘಾಟನೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಸಿಡಿಪಿಒ ತಮ್ಮ ಸಿಬ್ಬಂದಿಗೆ ಕೇಂದ್ರದ ಉದ್ಘಾಟನೆಗೆ ಮೌಖಿಕ ಸೂಚನೆ ನೀಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ಯ ಜ.3ರ ಸಂಚಿಕೆಯಲ್ಲಿ ‘ಬಾಗಿಲು ತೆರೆಯದ ಅಂಗನವಾಡಿ ಕೇಂದ್ರ’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಆದರೆ ಅದೇ ದಿನ ಬೆಳಿಗ್ಗೆ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಮತ್ತು ಸಿಬ್ಬಂದಿ ತರಾತುರಿಯಲ್ಲಿ ಪಟ್ಟಣ ಪಂಚಾಯಿತಿ ಹಾಕಿದ್ದ ಬೀಗ ಮುರಿದು ಕೇಂದ್ರದ ಉದ್ಘಾಟನೆ ಶಾಸ್ತ್ರ ನೆರವೇರಿಸಿದರು.
ಉದ್ಘಾಟನೆಗೆ ಸಿಡಿಪಿಒ ತಾಕೀತು: ಈ ಕುರಿತು ‘ಪ್ರಜಾವಾಣಿ’ಗೆ ವಿವರಿಸಿದ ಮೇಲ್ವಿಚಾರಕಿ ಸಾವಿತ್ರಿ, ಬೆಳಿಗ್ಗೆ ದೂರವಾಣಿ ಕರೆ ಮಾಡಿದ ಸಿಡಿಪಿಒ ಅವರು ಏನೇ ಆದರೂ ಅಂಗನವಾಡಿ ಕೇಂದ್ರ ಉದ್ಘಾಟನೆ ನಡೆಸಬೇಕು ಎಂದೇ ತಾಕೀತು ಮಾಡಿದ್ದರು. ಆದರೆ ಕಟ್ಟಡ ಇರುವ ಪ್ರದೇಶದ ವಿವಾದದಲ್ಲಿರುವ ಯಾವ ಮಾಹಿತಿಯೂ ತಮಗೆ ಗೊತ್ತಾಗಿಲ್ಲ. ಮೇಲಧಿಕಾರಿ ನೀಡಿದ ಆದೇಶವ ಪಾಲಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರಕರಣ ನ್ಯಾಯಾಲಯದಲ್ಲಿದ್ದರೂ ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಿರುವುದು ನ್ಯಾಯಾಂಗ ನಿಂದನೆಯಾಗಲಿದ್ದು ಅಧಿಕಾರಿಗಳ ಈ ಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತರುವುದಾಗಿ ಚಂದ್ರಶೇಖರ ಗುರಿಕಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.