ಕೊಪ್ಪಳ: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ ‘ಸರ್ಕಾರಿ ಶಿಕ್ಷಕಿಯರು ಎಂದು ಪರಿಗಣಿಸಬೇಕು ಹಾಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಬೇಡಿಕೆಗಳನ್ನು ಕಾರ್ಯಕರ್ತೆಯರು ಮುಂದಿಟ್ಟಿದ್ದಾರೆ. ಅವರ ಆರೇಳು ಸಂಘಟನೆಗಳು ಇವೆ. ಒಂದೊಂದು ಸಂಘಟನೆಗಳು ತಮ್ಮ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಂಡಗಳನ್ನು ಹೊಂದಿವೆ. ಒಂದಾದ ಮೇಲೆ ಇನ್ನೊಂದು ಸಂಘಟನೆ ಪ್ರತಿಭಟನೆ ಮಾಡಿದರೆ ಸದಾ ಅವರ ಬಳಿ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಮೊದಲು ಹೋರಾಟ ಮಾಡಿದ ಒಂದು ಸಂಘಟನೆಯ ಮುಖಂಡರೊಂದಿಗೆ ಮಾತನಾಡಿ ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಬರುವ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದೆ. ಆದರೂ, ಇನ್ನೊಂದು ಸಂಘಟನೆ ಪ್ರತಿಭಟನೆ ಆರಂಭಿಸಿತು. ಸಚಿವನಾಗಿ ಹಣಕಾಸಿನ ಎಲ್ಲಾ ಬೇಡಿಕೆಗಳನ್ನು ನಾನೊಬ್ಬನೇ ಈಡೇರಿಸಲು ಸಾಧ್ಯವಾಗಲಿಕ್ಕಿಲ್ಲ. ಆದ್ದರಿಂದ ಇದನ್ನು ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿ ಜೊತೆ ಚರ್ಚಿಸುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.