ADVERTISEMENT

ಗಂಗಾವತಿ | ಅಕ್ರಮ ರೆಸಾರ್ಟ್‌ಗಳಿಗೆ ಪ್ರಾಧಿಕಾರದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 16:10 IST
Last Updated 31 ಜನವರಿ 2024, 16:10 IST

ಗಂಗಾವತಿ: ತಾಲ್ಲೂಕಿನ ಸಾಣಾಪುರ, ಹನುಮನಹಳ್ಳಿ, ಚಿಕ್ಕರಾಂಪುರ ಹಾಗೂ ಆನೆಗೊಂದಿ ಭಾಗದಲ್ಲಿ ನಿರ್ಮಿಸಲಾದ ಅನಧಿಕೃತ ರೆಸಾರ್ಟ್ ಮಾಲೀಕರಿಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದು ‘ಮೂರು ದಿನಗಳ ಒಳಗೆ ಸ್ವಯಂ ಪ್ರೇರಿತವಾಗಿ ರೆಸಾರ್ಟ್ ತೆರವು ಮಾಡಿಕೊಳ್ಳಬೇಕು’ ಎಂದು ಸೂಚಿದ್ದಾರೆ.

‌ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣೆ ಪ್ರಾಧಿಕಾರದ ವ್ಯಾಪ್ತಿಗೆ ಗಂಗಾವತಿ ತಾಲ್ಲೂಕಿನ 15 ಗ್ರಾಮಗಳು ಬರುತ್ತಿದ್ದು, ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಬೇಕಿದ್ದರೂ ಪ್ರಾಧಿಕಾರದ ಪರವಾನಗಿ ಕಡ್ಡಾಯ. ಆದರೆ ಇದನ್ನು ಉಲ್ಲಂಘಿಸಿ ಕಂದಾಯ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಳ್ಳದೇ ಅನಧಿಕೃತವಾಗಿ ರೆಸಾರ್ಟ್‌ಗಳನ್ನು ನಿರ್ಮಿಸಿ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕೆಲ ವರ್ಷಗಳ ಹಿಂದೆ ವಿರೂಪಾಪುರಗಡ್ಡೆ, ಸಾಣಾಪುರ, ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ನಡೆಸುತ್ತಿರುವ ಬಗ್ಗೆ ನ್ಯಾಯಾಲಯಕ್ ಕೆಹೋದಾಗ, ನ್ಯಾಯಾಲಯ ತೆರವಿಗೆ ಆದೇಶದ ನೀಡಿತ್ತು. ಈ ವೇಳೆ ಅಂದಿನ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಎಲ್ಲ ರೆಸಾರ್ಟ್‌ಗಳನ್ನು ತೆರವುಮಾಡಿ ನೆಲಸಮ ಮಾಡಿತ್ತು.

ADVERTISEMENT

ಕಳೆದ ಎರಡು ವರ್ಷಗಳಲ್ಲಿ ಮತ್ತೆ ಅನಧಿಕೃತ ರೆಸಾರ್ಟ್‌ಗಳು ತಲೆ ಎತ್ತಿದಾಗ, ಕೆಲವರು ನ್ಯಾಯಾಂಗ ನಿಂದನೆ ಮಾಡಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಾರೆ ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಕಳೆದ ವರ್ಷ ಜೂ.19 ಹಾಗೂ 20 ರಂದು ಹಂಪಿ ಪ್ರಾಧಿಕಾರ ಅಧಿಕಾರಿಗಳು ಎಲ್ಲ ರೆಸಾರ್ಟ್‌ ತೆರವು ಮಾಡಿಸಿ ಜಪ್ತಿ ಮಾಡಿದ್ದರು.

ನ್ಯಾಯಾಂಗ ನಿಂದನೆ ಪ್ರಕರಣ ಚಾಲ್ತಿಯಲ್ಲಿರುವಾಗಲೇ ಜಪ್ತಿ ಮಾಡಿದ ರೆಸಾರ್ಟ್‌ಗಳನ್ನು ಮಾಲೀಕರು ಪುನಃ ಆರಂಭಿಸಿದ್ದಾರೆ. ಈ ಕುರಿತು ಪ್ರಾಧಿಕಾರಕ್ಕೆ ಹಲವು ದೂರುಗಳು ಬಂದಿವೆ. ಮೂರು ದಿನಗಳ ಒಳಗೆ ಸ್ವಯಂಪ್ರೇರಿತವಾಗಿ ತೆರವು ಮಾಡಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.